ದಾವಣಗೆರೆ: ಕೊರೊನಾ ಎಂಬ ಮಹಾಮಾರಿ ರಾಜ್ಯಕ್ಕೆ ವಕ್ಕರಿಸಿದ ಬಳಿಕ ಸಭೆ ಸಮಾರಂಭಗಳಿಗೆ ಹೆಚ್ಚು ಜನ ಬರದಂತೆ ಆದೇಶ ಹೊರಡಿಸಲಾಗಿತ್ತು. ಆದರೆ ಇದೀಗ ದಾವಣಗೆರೆಯ ಸೀಲ್ಡೌನ್ ಪ್ರದೇಶವೊಂದರಲ್ಲೇ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದ ಘಟನೆ ಬೆಳಕಿಗೆ ಬಂದಿದೆ.
ಹೌದು. ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿರುವ ಗಾಂಧಿನಗರ ಕಂಟೈನ್ಮೆಂಟ್ ಏರಿಯಾದಲ್ಲಿ ಈ ಅದ್ಧೂರಿ ಮದುವೆ ನಡೆದಿದೆ. ಈ ಮೂಲಕ ಕಂಟೈನ್ಮೆಂಟ್ ಏರಿಯಾದಲ್ಲಿಯೇ ಹೇಳೋರಿಲ್ಲ ಕೇಳೋರಿಲ್ಲ ಅನ್ನುವಂತಾಗಿದೆ. ಅಲ್ಲದೆ ಈ ಘಟನೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.
ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಗಾಂಧಿನಗರ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿತ್ತು. ಆದರೂ ಇಸ್ಮಾಯಿಲ್ ಸಾಬ್ ಅವರ ಮೊಮ್ಮಗಳ ಮದುವೆ ನಡೆದಿತ್ತು. ಪೆಂಡಾಲು ಹಾಕಿ ಮದುವೆ ಮಾಡುವವರೆಗೆ ಮೈಮರೆತಿದ್ದ ಅಧಿಕಾರಿಗಳು ಮದುವೆ ಮುಗಿದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಆದರೂ ಕಾನೂನು ಉಲ್ಲಂಘನೆ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಸೀಲ್ಡೌನ್ ಪ್ರದೇಶ ಕೇವಲ ನಾಮಾಕಾವಾಸ್ತೆಗೆ ಆಯ್ತಾ ಅನ್ನೋ ಪ್ರಶ್ನೆ ಎದ್ದಿದೆ.