– 5 ದಿನ ಗೃಹ ಬಂಧನದಲ್ಲಿಟ್ಟು ಕಿರುಕುಳ
– ಪೊಲೀಸರ ಮುಂದೆ ಪತ್ನಿಯ ಕೃತ್ಯ ತಿಳಿಸಿ ಪತಿ ಸಾವು
ಚಾಮರಾಜನಗರ: ಹಣಕಾಸಿನ ವ್ಯವಹಾರದಲ್ಲಿ ಗಂಡ-ಹೆಂಡತಿ ನಡುವೆ ವೈಷಮ್ಯ ಉಂಟಾಗಿ ಸ್ವಂತ ಅಣ್ಣನ ಜೊತೆ ಸೇರಿ ಪತ್ನಿಯೇ ಎರಡನೇ ಪತಿಯನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೊಳ್ಳೇಗಾಲದ ಮುಡಿಗುಂಡಂ ನಿವಾಸಿ ಸುಬ್ರಹ್ಮಣ್ಯ ಕೊಲೆಯಾದ ವ್ಯಕ್ತಿ. ಆರೋಪಿ ಪತ್ನಿ ರಶ್ಮಿ ತನ್ನ ಸಹೋದರ ರಾಕೇಶ್ ಜೊತೆ ಸೇರಿಕೊಂಡು ಪತಿಯನ್ನೇ ಕಿಡ್ನಾಪ್ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ.
ಏನಿದು ಪ್ರಕರಣ?
ಆರೋಪಿ ರಶ್ಮಿಗೆ ಈಗಾಗಲೇ ಮದುವೆಯಾಗಿ 11 ವರ್ಷದ ಮಗ ಕೂಡ ಇದ್ದನು. ಆದರೆ ಪತಿಯ ಜೊತೆ ಜಗಳ ಮಾಡಿಕೊಂಡು ಡಿವೋರ್ಸ್ ತೆಗೆದುಕೊಂಡು ಬೇರೆಯಾಗಿದ್ದಳು. ನಂತರ ನಾಲ್ಕು ವರ್ಷಗಳ ಹಿಂದೆ ಮೃತ ಸುಬ್ರಹ್ಮಣ್ಯ ಜೊತೆ ಮದುವೆಯಾಗಿದ್ದಳು. ಒಂದು ವರ್ಷದ ಹಿಂದೆ ಮತ್ತೆ ಆರೋಪಿ ರಶ್ಮಿ ಮೊದಲನೆಯ ಪತಿಯ ಬಳಿ ಹೋಗಿದ್ದಳು. ಆದರೆ ಮತ್ತೆ ಜಗಳ ಮಾಡಿಕೊಂಡು ಆಸ್ತಿಗಾಗಿ ಎರಡನೇ ಪತಿ ಬಳಿ ಬಂದಿದ್ದಳು ಎಂದು ತಿಳಿದು ಬಂದಿದೆ.
ಆರೋಪಿ ರಶ್ಮಿ ಪತಿ ಸುಬ್ರಹ್ಮಣ್ಯರನ್ನು ಅಪಹರಿಸಿ ಐದು ದಿನಗಳ ಕಾಲ ಗೃಹ ಬಂಧನದಲ್ಲಿಟ್ಟಿದ್ದಳು. ಅಲ್ಲದೇ ಹಣಕ್ಕಾಗಿ ಐದು ದಿನಗಳ ಕಾಲ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಬಂಧನದಲ್ಲಿದ್ದಾಗ ಪತಿಯ ಉಗುರು ಕಿತ್ತು ರಾಡ್ನಿಂದ ಕಿರಾತಕರು ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾಗಿ ಅಸ್ವಸ್ಥರಾಗಿದ್ದ ಸುಬ್ರಹ್ಮಣ್ಯರನ್ನು ನನ್ನು ಮುಡಿಗುಂಡದ ಮನೆಗೆ ಬಿಟ್ಟು ಆರೋಪಿಗಳು ಹೋಗಿದ್ದಾರೆ. ತಕ್ಷಣ ಸುಬ್ರಹ್ಮಣ್ಯರನ್ನು ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂರು ದಿನಗಳ ಕಾಲ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ವಿಜಯನಗರ ಪೊಲೀಸರ ಮುಂದೆ ಘಟನೆಯ ಸಂಪೂರ್ಣ ವಿವರ ನೀಡಿ ಸುಬ್ರಹ್ಮಣ್ಯ ಸಾವನ್ನಪ್ಪಿದ್ದಾರೆ.
ಇದೀಗ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ ರಶ್ಮಿ, ಸಹೋದರ ರಾಕೇಶ್, ಮುಡಿಗುಂಡದ ಪ್ರದೀಪ್, ರಾಕೇಶ್ ಪಡಗೂರು ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೊದಲನೇ ಆರೋಪಿ ರಶ್ಮಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಕೊಳ್ಳೇಗಾಲ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ. ರಶ್ಮಿ ಸಹೋದರ ರಾಕೇಶ್ ಮುಡಿಗುಂಡ ಮತ್ತು ಆತನ ಇಬ್ಬರು ಸ್ನೇಹಿತರಾದ ಪ್ರದೀಪ್ ಹಾಗೂ ರಾಕೇಶ್ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಮೂವರ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.