ಕಾರವಾರ: ದೇವಾಲಯಗಳಿಗೆ ಎಂದು ಭೇಟಿ ನೀಡದ ಕೆಲ ಮಂದಿ ಇಂದು ಮತಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಅವರ ಜಾತ್ಯಾತೀತ ಭಾವನೆ ಮತಗಳಿಗಾಗಿ ಬದಲಾಗಿದ್ದು, ಮಸೀದಿ ಹಾಗೂ ಚರ್ಚ್ಗೆ ಹೋಗುವವರು ದೇವಸ್ಥಾನಕ್ಕೆ ಹೋಗಿ ನಾನು ಹಿಂದು ಎನ್ನುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.
ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್ ಆದರೆ ಮಗ ಹಿಂದು. ಜಗತ್ತಿನಲ್ಲಿ ಸಿಗದ ಹೈಬ್ರಿಡ್ ಪುತ್ರ ಸಿಕ್ಕಿದ್ದಾರೆ. ಅಮ್ಮ ಅಪ್ಪನ ಪರಿಚಯ ಇಲ್ಲದವರು ಇಂದು ದೇವರ ಪೂಜೆ ಮಾಡುತ್ತಿದ್ದಾರೆ. ಇಂತಹ ಹೈಬ್ರಿಡ್ ಪುತ್ರರು ಬೇಕು ಎಂದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ ಇದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಲೇವಡಿ ಮಾಡಿದರು.
ಸಿದ್ದಾಪುರದ ಶಂಕರಮಠದಲ್ಲಿ ನಡೆದ ಕಾರ್ಯಕರ್ತರ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಜನಪರ ಸರ್ಕಾರ. 65 ವರ್ಷ ಆಡಳಿತ ನಡೆಸಿದವರು ಜನರನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಇಟ್ಟ ರೀತಿ ನಡೆಸಿಕೊಂಡರು. ಜನರನ್ನು ಭಿಕ್ಷುಕರ ರೀತಿ ನಡೆಸಿಕೊಂಡಿದ್ದಾರೆ. ಜನರ ಭಾವನೆಗಳ ಜೊತೆ ಚಕ್ಕಂದವಾಡಿದ್ದು, ಆದರೆ ಇಂದು ನಮ್ಮ ಸರ್ಕಾರ ಜನರ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ವ್ಯವಸ್ಥೆ ಮಾಡಿದೆ. ಕೆಲವು ಯೋಜನೆಗಳಲ್ಲಿ ರಾಜ್ಯದ ಕಂಬಳದ ಕೋಣಗಳ ಸರ್ಕಾರ ಹಣವನ್ನು ದುರುಪಯೋಗ ಮಾಡಿದೆ ಎಂದು ಆರೋಪ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ನಾವು 300 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಈ ದೇಶವನ್ನು ಭಾರತೀಯ ರಕ್ತವೇ ಆಳಬೇಕು, ವಿದೇಶಿ ಇಟಲಿ ರಕ್ತ ಬೇಡ. ನಮ್ಮ ದೇಶವನ್ನು ಇಷ್ಟು ದಿನ ಆಳಿದ ಕಾಂಗ್ರೆಸ್ ದಿವಾಳಿಯಾಗಬೇಕು ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv