ಚಿಕ್ಕಬಳ್ಳಾಪುರ: ಕಲ್ಲು ಚಪ್ಪಡಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಜಿಲ್ಲೆಯ ಗುಡಿಬಂಡೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7 ರ ಚೆಂಡೂರು ಕ್ರಾಸ್ ಬಳಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನಾರಾಯಣಸ್ವಾಮಿ (30) ಎಂದು ಗುರುತಿಸಲಾಗಿದೆ. ದಟ್ಟವಾದ ಮಂಜು ಆವರಿಸಿದ್ದ ಹಿನ್ನಲೆಯಲ್ಲಿ ಸರಿಯಾಗಿ ದಾರಿ ಕಾಣದೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಕಲ್ಲು ಚಪ್ಪಡಿಗಳು ಕ್ಯಾಂಟರ್ ಕ್ಯಾಬಿನ್ ಗೆ ತೂರಿವೆ. ಪರಿಣಾಮ ಚಾಲಕ ಕ್ಯಾಂಟರ್ ಒಳಗೆಯೇ ಸಿಲುಕಿಕೊಂಡಿದ್ದು, ಹೊರಬರಲು ಸಾಧ್ಯವಾಗದೆ ಸುಮಾರು 1 ಗಂಟೆ ಕಾಲ ನರಳಾಡಿದ್ದಾರೆ. ಹೊರಬರಲು ಹರಸಾಹಸಪಟ್ಟು ಸಾಧ್ಯವಾಗದೇ ಇದ್ದಾಗ ಕೊನೆಗೆ ಕ್ರೇನ್ ಸಹಾಯದಿಂದ ಕ್ಯಾಂಟರ್ ಕ್ಯಾಬಿನ್ ನಿಂದ ಚಾಲಕನನ್ನು ಹೊರತೆಗೆಯಲಾಯಿತು.
ಸದ್ಯ ಕ್ಯಾಂಟರ್ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಚಾಲಕ ಹೊರಬರಲು ಪರದಾಡಿದರೂ ಮೃತನ ಕಡೆಯವರು ಚಾಲಕನ ನೆರವಿಗೆ ಧಾವಿಸದೆ ಹಿಡಿಶಾಪ ಹಾಕಿದ್ದು ನೆರೆದವರಲ್ಲಿ ಕಣ್ಣೀರು ತರಿಸಿತ್ತು.
ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.