– ʻಪಬ್ಲಿಕ್ ಟಿವಿʼ ವರದಿ ಬಳಿಕ ಎಚ್ಚೆತ್ತ ಸರ್ಕಾರ
ಹಾಸನ: ಜಿಲ್ಲೆಯ ಶಾಂತಿಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಅವ್ಯವಸ್ಥೆ ಕುರಿತು ʻಪಬ್ಲಿಕ್ ಟಿವಿʼ ವರದಿ ಪ್ರಸಾರವಾದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ (KM Shivalinge Gowda) ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ʻಪ್ರಜಾ ಸೇವಾʼ ಆಂದೋಲನ (Praja Seva Andolana) ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ದೂದ್ಪೀರ್ ಅವರನ್ನ ತರಾಟೆಗೆ ತೆಗೆದುಕೊಂಡ ಸಚಿವರು, ʻನಿನ್ನ ಮಕ್ಕಳಾಗಿದ್ರೆ ಅಲ್ಲೇ ಮಲಗಿಸ್ತಿದ್ಯಾ ಹೇಳಪ್ಪ? ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಾ ʼ ಅಂತ ಸಮಾಜ ಕಲ್ಯಾಣ ಇಲಾಖೆ (Social Welfare Department) ಉಪನಿರ್ದೇಶಕರನ್ನ ಪ್ರಶ್ನೆ ಮಾಡಿದ್ದಾರೆ.

15 ದಿನದೊಳಗೆ ಹಾಸ್ಟೆಲ್ ಸ್ಥಳಾಂತರಕ್ಕೆ ಸೂಚನೆ
ಹಾಸ್ಟೆಲ್ನಲ್ಲಿ ಮಕ್ಕಳಿಗೆ (Hostel Children) ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೆ ಮಕ್ಕಳನ್ನ ಬೇರೆ ಸುರಕ್ಷಿತ ಕಟ್ಟಡಕ್ಕೆ ತಕ್ಷಣ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ. ʻʻಹೊಸ ಕಟ್ಟಡ ಹುಡುಕಿ ಮಕ್ಕಳನ್ನ ಅಲ್ಲಿಗೆ ಶಿಫ್ಟ್ ಮಾಡಿ. ನಾನು ಮತ್ತೆ ವಿಸಿಟ್ ಮಾಡುವುದರೊಳಗೆ ಹಾಸ್ಟೆಲ್ ಸ್ಥಳಾಂತರವಾಗಿರಬೇಕು. ಇಲ್ಲವಾದ್ರೆ ನಾನು ಸುಮ್ಮನಿರಲ್ಲʼʼ ಅಂತಾ ಎಚ್ಚರಿಕೆ ನೀಡಿದ್ದಾರೆ.
ಕೊಟ್ಟಿಗೆಯಂತಿರುವ ಶೆಡ್ನಲ್ಲಿ 172 ಮಕ್ಕಳ ವಾಸ್ತವ್ಯ
ಹಾಸನ ತಾಲ್ಲೂಕಿನ ಶಾಂತಿಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಸುಮಾರು 172 ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ 92 ಬಾಲಕರು ಮತ್ತು 80 ಬಾಲಕಿಯರು ಇದ್ದಾರೆ. ಕಳೆದ 5 ವರ್ಷಗಳಿಂದ ದನದ ಶೆಡ್ನಂತಿರುವ ಬಾಡಿಗೆ ಕಟ್ಟಡದಲ್ಲೇ ಮಕ್ಕಳು ವಾಸಿಸುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಊಟ, ನಿದ್ರೆ ಹಾಗೂ ಪಾಠ ಕೇಳುವಂತಹ ದುರವಸ್ಥೆ ಇದ್ದು, ವಿದ್ಯಾರ್ಥಿಗಳು ನೆಲದಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಸತಿ ಶಾಲೆಯಲ್ಲಿ ಗಾಳಿ ಮತ್ತು ಬೆಳಕಿನ ಕೊರತೆಯ ಜೊತೆಗೆ ಶೌಚಾಲಯಗಳ ಸಂಖ್ಯೆಯೂ ತೀರಾ ಕಡಿಮೆಯಾಗಿದೆ. 92 ಬಾಲಕರಿಗೆ ಕೇವಲ ಐದು ಶೌಚಾಲಯಗಳಿದ್ದು, ಬಾಲಕಿಯರಿಗೂ ಕನಿಷ್ಠ ಮೂಲಸೌಕರ್ಯಗಳ ಕೊರತೆ ಇದೆ. ಹೊಸ ಕಟ್ಟಡ ನಿರ್ಮಾಣವಾಗುತ್ತಿರುವ ಹಿನ್ನೆಲೆ ಪರ್ಯಾಯ ಸ್ಥಳ ಸಿಗುತ್ತಿಲ್ಲ ಎಂದು ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ಮಾಡಿತ್ತು. ʻಪಬ್ಲಿಕ್ ಟಿವಿʼ ವರದಿ ಪ್ರಸಾರವಾದ ಬೆನ್ನಲ್ಲೇ ಸಚಿವರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವ
ಹಾಸ್ಟೆಲ್ ಅವ್ಯವಸ್ಥೆ ಕುರಿತು ಪ್ರಶ್ನಿಸಿದ ಸಚಿವರಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ದೂದ್ಪೀರ್, ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ನಡೆಯುತ್ತಿದ್ದು, ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಸ್ಥಳಾವಕಾಶದ ಸಮಸ್ಯೆ ಇದೆ ಎಂದು ತಿಳಿಸಿದ್ರು. ಇದಕ್ಕೆ ಸಿಡಿಮಿಡಿಗೊಂಡ ಸಚಿವರು, ಸ್ಥಳಾವಕಾಶ ಕಡಿಮೆ ಇದೆ ಅಂದ್ರೆ, ಕೂಡಿ ಹಾಕಲು ಅವರೇನು ಕುರಿಗಳಾ, ದನಗಳಾ? ʻಇಡೀ ರಾಜ್ಯದಲ್ಲಿ ನ್ಯೂಸ್ ಆಗಿದೆ. ಏನ್ ಮಾಡ್ತಿದ್ದೀಯಪ್ಪಾ ನೀನು? ನಿನ್ನ ಮಕ್ಕಳಾಗಿದ್ರೆ ಅಲ್ಲಿ ಮಲಗಿಸುತ್ತಿದ್ದಿಯಾ? ಅಂತಾ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾಲ್ಕು ತಿಂಗಳಲ್ಲಿ ಹೊಸ ಕಟ್ಟಡ ಪೂರ್ಣ?
ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ, ಘಣಘಟ್ಟದಲ್ಲಿ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಸುಮಾರು 60% ಕಾಮಗಾರಿ ಪೂರ್ಣಗೊಂಡಿದೆ. 4 ತಿಂಗಳಲ್ಲಿ ಕಟ್ಟಡ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೊಸ ಕಟ್ಟಡದಲ್ಲಿ ಮಕ್ಕಳಿಗೆ ಹಾಸಿಗೆ ಹಾಗೂ ಮಂಚಗಳನ್ನ ಹಾಕಲು ಸೂಕ್ತ ಜಾಗವಿಲ್ಲದಿರುವುದರಿಂದ ಪ್ರಸ್ತುತ ಹಾಸ್ಟೆಲ್ನಲ್ಲಿ ತೀವ್ರ ಅನಾನುಕೂಲತೆ ಉಂಟಾಗಿದೆ ಎಂದು ಸಚಿವರಿಗೆ ಉತ್ತರ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆದಾರರು 1 ವರ್ಷ ಎಂದರೆ 3 ವರ್ಷ ಮಾಡ್ತಾರೆ. ಅವರು ಸರಿಯಿಲ್ಲ, ಕಟ್ಟಡವೂ ಸರಿಯಿಲ್ಲ. ನಾನು ತಾವು ಮುಂದಿನ ಬಾರಿ ಭೇಟಿ ನೀಡುವ ವೇಳೆಗೆ ಮಕ್ಕಳು ಹಳೆಯ ಕಟ್ಟಡದಲ್ಲಿರಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ರು.
