– ರಾತ್ರಿ ಮಲಗಿದ್ದಾಗ ಕುಸಿದ ಗುಡ್ಡ
– ಅವಶೇಷಗಳ ಅಡಿ ಸಿಲುಕಿದ್ದ ಓರ್ವನ ರಕ್ಷಣೆ
ಶಿವಮೊಗ್ಗ: ಭಾರೀ ಮಳೆಯಿಂದಾಗಿ (Rain) ಮನೆ ಮೇಲೆ ಗುಡ್ಡ ಕುಸಿದು ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದುರ್ಘಟನೆ ತೀರ್ಥಹಳ್ಳಿ (Tirthahalli) ಪಟ್ಟಣದ ತಮ್ಮಡಿಕೊಪ್ಪ ಕೆರೆ ಬಳಿ ನಡೆದಿದೆ.
ಮಲ್ಲಿಕಾರ್ಜುನ (30), ನಾಗವೇಣಿ(25) ಹಾಗೂ ದಂಪತಿಯ ಮಗ ಸಂತೋಷ್ (4) ಮೃತಪಟ್ಟವರು. ಇವರೆಲ್ಲ ಮಲಗಿದ್ದಾಗ ರಾತ್ರಿ ಮನೆ ಮೇಲೆ ಗುಡ್ಡ ಕುಸಿದಿದೆ. ಮಣ್ಣಿನಡಿ ಮೃತದೇಹಗಳು ಸಿಲುಕಿವೆ. ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ತೆರವು ಕಾರ್ಯಕ್ಕೆ ಮಳೆಯಿಂದ ಕಷ್ಟವಾಗುತ್ತಿದೆ.
ಅವಶೇಷಗಳ ಅಡಿ ಸಿಲುಕಿದ್ದ ಹನುಮಂತ ಎಂಬವರನ್ನು ರಕ್ಷಣಾ ತಂಡ ರಕ್ಷಿಸಿದೆ. ಮಣ್ಣು ಹಾಗೂ ಅವಶೇಷಗಳ ಅಡಿ ಅವರ ಕಾಲಷ್ಟೇ ಸಿಲುಕಿತ್ತು. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
