ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (Assembly Election) ಮೊದಲ ಹಂತಕ್ಕೆ ನಾಳೆ (ಏ.23) ಮತದಾನ ನಡೆಯಲಿದೆ.
ನಾಳೆ ಉತರ ಬಂಗಾಳದ ಎಲ್ಲಾ 152 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಬಂಗಾಳದ ಮುರ್ಶಿದಾಬಾದ್, ಜರ್ಗಾಮ್, ಮೇದಿನಿಪುರೆ, ಬಂಕುರಾ, ಪುರುಲಿಯಾ, ಪಶ್ಚಿಮ ಬರ್ಧಮಾನ್ ಮತ್ತು ಬಿರ್ಬುಮ್ನ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ನಾಯಕರು ತಪ್ಪು ಮಾಡಿದ್ದರೆ ತಲೆದಂಡ ಮಾಡಲಿ: ಬಾಲಕೃಷ್ಣ
ಮೊದಲ ಹಂತದಲ್ಲಿ 16 ಜಿಲ್ಲೆಗಳ 152 ಕ್ಷೇತ್ರಗಳಿದ್ದು, 1,478 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೆಚ್ಚುವರಿ 4,660 ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು ಮತಗಟ್ಟೆಗಳ ಪೈಕಿ 8,000ಕ್ಕೂ ಹೆಚ್ಚು ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ರಾಜ್ಯದಾದ್ಯಂತ 780ಕ್ಕೂ ಹೆಚ್ಚು ಕೇಂದ್ರ ಭದ್ರತಾ ಪಡೆಗಳ ಕಂಪನಿಗಳು ನಿಯೋಜನೆ ಮಾಡಿದೆ. ಮತದಾನಕ್ಕೂ ಮುನ್ನ ಈಗಾಗಲೇ 199ಕ್ಕೂ ಹೆಚ್ಚು ಗೂಂಡಾಗಳನ್ನು ಬಂಧಿಸಲಾಗಿದೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಮ್ಮ ಭದ್ರಕೋಟೆಯಾದ ನಂದಿಗ್ರಾಮ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಭಬಾನಿಪುರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಖಾಡದಲ್ಲಿದ್ದಾರೆ. ಮಠಭಂಗದಿಂದ (ಎಸ್ಸಿ) ಕೇಂದ್ರ ಸಚಿವ ನಿಸಿತ್ ಪ್ರಮಾಣಿಕ್ ಮತ್ತು ಖರಗ್ಪುರ ಸದರ್ನಿಂದ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಚುನಾವಣೆ ಎದುರಿಸಲಿದ್ದಾರೆ. ಕಾಂಗ್ರೆಸ್ನಿಂದ ಅಧೀರ್ ರಂಜನ್ ಚೌಧರಿ ಬಹರಂಪುರದಿಂದ, ಮೌಸಮ್ ನೂರ್ ಮಾಲತಿಪುರದಿಂದ ಮತ್ತು ಮೃನ್ಮೋಯ್ ಸರ್ಕಾರ್ ಅಲಿಪುರ್ದವಾರ್ಸ್ನಿಂದ ಸ್ಪರ್ಧಿಸಿದ್ದಾರೆ.
ಟಿಎಂಸಿ ಮತ್ತು ಬಿಜೆಪಿ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್ ಮತ್ತು ಎಡಪಕ್ಷಗಳು ನೆಪಮಾತ್ರಕ್ಕೆ ಸ್ಪರ್ಧಿಸಿವೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಆಡಳಿತದಲ್ಲಿನ ಹಿಂಸಾಚಾರ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸಿ, ಜನರಲ್ಲಿ ವಿಶ್ವಾಸ ಮೂಡಿಸುವ ಶಪಥ ಮಾಡಿರುವ ಬಿಜೆಪಿ 12 ಪ್ರಮುಖ ಭರವಸೆಗಳನ್ನು ಘೋಷಿಸಿದೆ. ಉಚಿತ ಬಸ್ ಪ್ರಯಾಣ, ರಾಜ್ಯದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಮತ್ತು ನಿರುದ್ಯೋಗಿ ಯುವಕ-ಯುವತಿಯರಿಗೆ ಪ್ರತಿ ತಿಂಗಳು 3,000 ರೂ.ಗಳ ಆರ್ಥಿಕ ನೆರವು ನೀಡಲಾಗುವುದು. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮತ್ತು ಅವರಿಗೆ ಸಂಪೂರ್ಣ ಭದ್ರತೆ ಒದಗಿಸಲು ವಿಶೇಷ ದುರ್ಗಾ ಸುರಕ್ಷಾ ಸ್ಕ್ವಾಡ್ ಎಂಬ ಪಡೆಯನ್ನು ರಚಿಸಲಾಗುವುದು ಸೇರಿದಂತೆ ಆಕರ್ಷಕ ಭರವಸೆ ನೀಡಿದೆ.
ದುವಾರೆ ಚಿಕಿತ್ಸೆ ಶಿಬಿರಗಳ ಮೂಲಕ, ಜನರು ತಮ್ಮ ಮನೆ ಬಾಗಿಲಿಗೆ ಗುಣಮಟ್ಟದ ಆರೋಗ್ಯ ಸೇವೆ, ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುವ ಪ್ರಮುಖ ಕಲ್ಯಾಣ ಕಾರ್ಯಕ್ರಮವಾದ `ಲಕ್ಷ್ಮಿ ಭಂಡಾರ್’ ಯೋಜನೆಯಡಿ ಮಹಿಳೆಯರಿಗೆ ನೀಡುತ್ತಿರುವ ಹಣವನ್ನು ಹೆಚ್ಚಿಸುವ ಭರವಸೆ, ಮಾಸಿಕ ಆರ್ಥಿಕ ಸಹಾಯವನ್ನು 500 ರೂ. ಹೆಚ್ಚಿಸಲಾಗುವುದು. ಸಾಮಾನ್ಯ ವರ್ಗದ ಮಹಿಳೆಯರು ತಿಂಗಳಿಗೆ 1,500 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸೇರಿದವರು ನೇರ ವರ್ಗಾವಣೆಯ ಮೂಲಕ ತಿಂಗಳಿಗೆ 1,700 ರೂ.ಗಳನ್ನು ನೀಡಲಾಗುವುದು ಎಂದು ಟಿಎಂಸಿ ಹೇಳಿದೆ.ಇದನ್ನೂ ಓದಿ: ಡಿಎಂಕೆ, ಎಐಎಡಿಎಂಕೆ ಮಧ್ಯೆ ನೇರ ಫೈಟ್ – ಸಂಚಲನ ಮೂಡಿಸಲಿದ್ದಾರಾ ವಿಜಯ್?
ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಏ ದೀದಿ ಎಂದು ಸಂಬೋಧಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿರುವ ಟಿಎಂಸಿ, ಒನ್ಸ್ ಎ ಗೂಂಡಾ, ಆಲ್ವೇಸ್ ಗೂಂಡಾ ಎಂದು ವಾಗ್ದಾಳಿ ನಡೆಸಿದೆ. ಕುರಿತು ಎಕ್ಸ್ಮಲ್ಲಿ ವಿಡಿಯೋ ಮೂಲಕ ಮಾತನಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಇಂದು ಬಂಗಾಳದ ಎಲ್ಲಾ ನಮ್ಮ ಸಹೋದರಿಯರು ಮತ್ತು ತಾಯಂದಿರು ಅಮಿತ್ ಶಾ ಅವರು ಮಾತನಾಡಿದ್ದನ್ನು ನೋಡಿದ್ದಾರೆ. 2021ರಲ್ಲಿ ಪ್ರಧಾನಿ ಮೋದಿಯವರು ದೀದಿ ಓ ದೀದಿ ಹೇಳಿದ್ದರ ಪರಿಣಾಮ ಏನಾಗಿತ್ತು ತಿಳಿದಿದೆ. ಇಂದು ಅಮಿತ್ ಶಾ ಏ ದೀದಿ, ಕಿವಿ ತೆರೆದು ಕೇಳು ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದು ಅವರ ನಕಲಿ ನಾರಿ ಶಕ್ತಿ ನಾಟಕವನ್ನು ಬಯಲು ಮಾಡಿದೆ. ಅವರಿಗೆ ಬಂಗಾಳದ ಸಂಸ್ಕೃತಿ ಗೊತ್ತಿಲ್ಲ. ಬಂಗಾಳದಲ್ಲಿ ಮಹಿಳೆಯರನ್ನು ಯಾರೂ ಈ ರೀತಿ ಮಾತನಾಡಿಸಲ್ಲ. ಬಂಗಾಳದ ಮಹಿಳೆಯರು ಶಾ ಅವರ ಈ ಮಾತನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಮೊದಲ ಹಂತದ ಮತದಾನಕ್ಕೂ ಮುನ್ನ ಸಿಎಂ ಮಮತಾ ಬ್ಯಾನರ್ಜಿಗೆ ದೂರವಾಣಿ ಕರೆ ಮಾಡಿ, ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಮತ್ತು `ಮಮತಾ ದೀದಿ’ ಅತ್ಯಂತ ಕಠಿಣವಾದ ಆದರೆ ಪ್ರಜಾಪ್ರಭುತ್ವದ ಪ್ರಮುಖ ಹೋರಾಟವನ್ನು ನಡೆಸುತ್ತಿದ್ದಾರೆ ಎಂದು ಬಣ್ಣಿಸಿದ್ದಾರೆ. ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಮತಾ ಬ್ಯಾನರ್ಜಿಗೆ ಬೆಂಬಲ ಸೂಚಿಸಿದ್ದಾರೆ.
ಈ ನಡುವೆ ಸುಪ್ರೀಂಕೋರ್ಟ್ನಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನಡೆಯಾಗಿದೆ. ಕಲ್ಲಿದ್ದಲು ಹಗರಣದ ತನಿಖೆಯ ಸಮಯದಲ್ಲಿ ಜನವರಿಯಲ್ಲಿ ಐ-ಪಿಎಸಿ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೈಯಕ್ತಿಕವಾಗಿ ದಾಳಿಯಲ್ಲಿ ಹಸ್ತಕ್ಷೇಪಕ್ಕೆ ಸುಪ್ರೀಂ ಆಕ್ಷೇಪ ವ್ಯಕ್ತಪಡಿಸಿದೆ. ತನಿಖೆಯಲ್ಲಿ ಮುಖ್ಯಮಂತ್ರಿಯವರ ಹಸ್ತಕ್ಷೇಪವು ರಾಜ್ಯ ಮತ್ತು ಕೇಂದ್ರದ ನಡುವಿನ ಪ್ರಕರಣವಲ್ಲ, ಬದಲಾಗಿ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಮಮತಾ ಬ್ಯಾನರ್ಜಿ ಅವರ ಪಾತ್ರವನ್ನು ಪ್ರಶ್ನಿಸಿದೆ. ಇಡಿ ಅಧಿಕಾರಿಗಳ ವಿರುದ್ಧ ರಾಜ್ಯದ ಕ್ರಮಕ್ಕೆ ನ್ಯಾಯಾಲಯ ತಡೆ ನೀಡಿದೆ ಮತ್ತು ಸಿಸಿಟಿವಿ ಸಾಕ್ಷ್ಯಗಳನ್ನು ಸಂರಕ್ಷಿಸಲು ಆದೇಶಿಸಿದೆ. ಇದನ್ನೂ ಓದಿ: ಮುಂಬೈ ತಲುಪಿದ ಕಚ್ಚಾ ತೈಲ ಹೊತ್ತ `ದೇಶ್ ಗರಿಮಾ’ ಹಡಗು



