– ಚೊಚ್ಚಲ ಗೆಲುವಿನ ಹುಡುಕಾಟದಲ್ಲಿ ಚೆನ್ನೈ
– ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಬೆಂಗಳೂರು
ಬೆಂಗಳೂರು: ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಐಪಿಎಲ್ ನ 2 ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಇದೀಗ ಸತ್ವ ಪರೀಕ್ಷೆಗೆ ಸಜ್ಜಾಗಿವೆ. ಆರ್ಸಿಬಿ ಈಗಾಗಲೇ ಮೊದಲ ಪಂದ್ಯ ಗೆದ್ದು ಶುಭಾರಂಭ ಕಂಡಿದ್ದರೆ, 5 ಬಾರಿಯ ಚಾಂಪಿಯನ್ ಚೆನ್ನೈ ತಂಡದ ವೈಫಲ್ಯ ಕಳೆದ ಸೀಸನ್ ನಂತೆಯೇ ಮುಂದುವರಿದಿದೆ.
ಈ ಸೀಸನ್ ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವುದರಿಂದ ಇದೀಗ ಗೆಲುವಿಗಾಗಿ ಹಪಾಹಪಿಸುತ್ತಿದೆ. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ (Chinnaswamy Stadium) ಇಂದಿನ (ಭಾನುವಾರ) ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ನಿರೀಕ್ಷೆ ಇದೆ. ಇದನ್ನೂ ಓದಿ: ಶ್ರೇಯಸ್ ಅಯ್ಯರ್ಗೆ 24 ಲಕ್ಷ ದಂಡ – ಪಂಜಾಬ್ ಕ್ಯಾಪ್ಟನ್ಗೆ ಕಾಡ್ತಿದೆ ಬ್ಯಾನ್ ಭೀತಿ

ಆರ್ಸಿಬಿಯೇ ಬಲಿಷ್ಠ
ಇತ್ತಂಡಗಳ ಬಲಾಬಲ ಲೆಕ್ಕ ಹಾಕಿದರೆ ಆರ್ಸಿಬಿ ಹೆಚ್ಚು ಬಲಿಷ್ಠವಾಗಿ ಕಂಡುಬರುತ್ತೆ. ಪ್ರಧಾನ ವೇಗಿ ಜೋಶ್ ಹೇಜಲ್ವುಡ್ , ಕಳೆದ ಸೀಸನ್ ನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ್ದ ಯಶ್ ದಯಾಳ್ ಅವರು ತಂಡದಲ್ಲಿ ಇಲ್ಲದಿರುವುದು ದೊಡ್ಡ ಹೊಡೆತ ನೀಡಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜಾಕೋಬ್ ಡಫಿ, ಹೇಜಲ್ವುಡ್ ಅವರಿಗೆ ಪರ್ಫೆಕ್ಟ್ ಬದಲಿ ಆಟಗಾರರಾಗಿ ಮೂಡಿಬಂದಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಅವರು ತಮ್ಮ ಪಾಲಿನ ಕೆಲಸ ಅಚ್ಚುಕಟ್ಟಾಗ ಮಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಅಭಿನಂದನ್ ಸಿಂಗ್ ಅವರನ್ನ ಆಡಿಸಲು ತಂಡದ ಮ್ಯಾನೇಜ್ ಮೆಂಟ್ ಮನಸು ಮಾಡದೇ ಇದ್ದಲ್ಲಿ ಆಗ ಯುವ ವೇಗಿ ಮಂಗೇಶ್ ಯಾದವ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಬಹುದು.
ಇನ್ನೂ ಆರ್ಸಿಬಿಯ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳಿಗೆ ಹೆಚ್ಚು ಕೆಲಸ ಉಳಿದಿರಲಿಲ್ಲ. ಆರಂಭಿಕ ಫಿಲ್ ಸಾಲ್ಟ್ ಆಟಕ್ಕೆ ಕುದುರಿಕೊಳ್ಳುವುದನ್ನ ಆರ್ಸಿಬಿ ಫ್ಯಾನ್ಸ್ ಕೂಡ ಎದುರು ನೋಡ್ತಿದ್ದಾರೆ. ಇದನ್ನೂ ಓದಿ: IPL 2026 | DC vs MI ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಡ್ತಿಲ್ಲ ಯಾಕೆ?

ಸಿಎಸ್ಕೆ ನಲ್ಲಿ ಏನು ಸಮಸ್ಯೆ?
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಂದಲ್ಲಿ ತಂಡದಲ್ಲಿ ಯಾವುದೂ ಸರಿಯಿಲ್ಲ ಎಂಬುದಂತೂ ಸ್ಪಷ್ಚ. ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ಸಂಪೂರ್ಣ ನೆಲಕಚ್ಚಿದ್ದರಿಂದ ಬೌಲರ್ ಗಳು ಯಾವ ಮ್ಯಾಜಿಕನ್ನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಪಂಜಾಬ್ ವಿರುದ್ಧ 2ನೇ ಪಂದ್ಯದಲ್ಲಿ ಬ್ಯಾಟರ್ ಗಳು ಉತ್ತಮ ಆಟ ಪ್ರದರ್ಶಿಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದರೂ ಅದನ್ನು ಉಳಿಸಿಕೊಳ್ಳಲು ಬೌಲಿಂಗ್ ವಿಭಾಗದಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಧೋನಿ ಇಲ್ಲ ಎಂಬುದೊಂದೇ ತಂಡದ ಸಮಸ್ಯೆಯಾಗಿ ಉಳಿದಿಲ್ಲ.

ಏತನ್ಮಧ್ಯೆ ಬಹಳ ಲೆಕ್ಕಾಚಾರ ಇಟ್ಟಿಕೊಂಡು ಚೆನ್ನೈ ಫ್ರಾಂಚೈಸಿಯು ಟ್ರೇಡ್ ಮೂಲಕ ಖರೀದಿಸದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರಿಂದ ಉತ್ತಮ ಪ್ರದರ್ಶನ ಬಾರದೇ ಇರುವುದ ಸಹ ತಂಡದ ಮ್ಯಾನೇಜ್ ಮೆಂಟ್ ನ ಚಿಂತೆಗೆ ಕಾರಣವಾಗಿದೆ. ಆದರೆ ಯುವ ಆಟಗಾರ ಆಯುಷ್ ಮ್ಹಾತ್ರೆ ಭರವಸೆ ಮೂಡಿಸಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ನಾನು ವಿದೇಶಿ ಆಟಗಾರನಾ? – ಕಾಲೆಳೆದ ಮಿಸ್ಟರ್ ನಾಗ್ಸ್ ಬುಡಕ್ಕೆ ಬೆಂಕಿಯಿಟ್ಟ ಕೊಹ್ಲಿ; ವಿಡಿಯೋ ಫುಲ್ ವೈರಲ್

