ಬೆಂಗಳೂರು/ಚಾಮರಾಜನಗರ: ಕಳೆದ ನವೆಂಬರ್ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತು ಬದ್ಧವಾಗಿ ಪುನಾರಂಭ ಮಾಡಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ (Eshwar Khandre) ಸಮರ್ಥಿಸಿಕೊಂಡರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಅವರು, ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದರು. ಸಫಾರಿ ದೇಶಾದ್ಯಂತ ಹಲವು ವರ್ಷದಿಂದ ನಡೆಯುತ್ತಿದೆ. ಒಂದು ಸಮೀಕ್ಷೆಯನ್ನೂ ನಡೆಸದೇ ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದರು. ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಅದೃಶ್ಯವಾಗಿ ಭಾರತಕ್ಕೆ ಬಂತು ಕಚ್ಚಾ ತೈಲ ಹೊತ್ತ ಹಡಗು
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು, ಸಫಾರಿಯನ್ನು ಏಕಾಏಕಿ ನಿಲ್ಲಿಸಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಮೂರು ಅಮೂಲ್ಯ ಜೀವಹಾನಿ ಆಗಿತ್ತು, ಒಬ್ಬರು ಶಾಶ್ವತವಾಗಿ ಅಂಗವಿಕಲರಾದರು, ಹುಲಿಗಳು ಕಾಡಿನಿಂದ ಹೊರಗೆ ಬಂದು ದಾಳಿ ಮಾಡುತ್ತಿದ್ದವು. ಜನರ ಅಮೂಲ್ಯ ಜೀವ ರಕ್ಷಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು.
ನವೆಂಬರ್ನಲ್ಲಿ ತಾವು ಚಾಮರಾಜನಗರದಲ್ಲಿ ಈ ಸಂಬಂಧ ಸಭೆ ನಡೆಸಿದಾಗ ಹಲವು ರೈತ ಸಂಘಟನೆಗಳು ಸಫಾರಿ ರಾತ್ರಿಯವರೆಗೂ ನಡೆಯುತ್ತಿದೆ. ಹೆಚ್ಚಿನ ವಾಹನಗಳ ಸಂಚಾರ ಇದೆ. ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದ ವಿಚಲಿತವಾಗಿ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿದ್ದು, ಸಫಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿ, ಮನವಿ ನೀಡಿದ್ದರು. ಈ ಮಧ್ಯೆ ತಾವು ಬೀದರ್ನಲ್ಲಿದ್ದಾಗ ಒಂದು ವಾರದ ಅಂತರದಲ್ಲಿ ಮತ್ತೊಂದು ಹುಲಿದಾಳಿ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸಿಬ್ಬಂದಿ ಮತ್ತು ವಾಹನವನ್ನು ಕಾಡಿನಂಚಿನ ಗ್ರಾಮದಲ್ಲಿ ನಿಗಾ ಇಡಲು ಬಳಸಲಾಯಿತು ಎಂದು ತಿಳಿಸಿದರು.
ಬಂಡೀಪುರದಲ್ಲಿ 314 ಕಿ.ಮೀ. ಗಡಿ ಇದೆ. ಅದರಲ್ಲಿ 100 ಕಿ.ಮೀ ಹೆಚ್ಚು ಗಡಿ ಸಂಘರ್ಷ ಪ್ರದೇಶವಾಗಿದೆ. ಆ ಪ್ರದೇಶದಲ್ಲಿ 25 ಕಳ್ಳಬೇಟೆ ನಿಗ್ರಹ ಶಿಬಿರ ಸ್ಥಾಪಿಸಿ, ಸಿಬ್ಬಂದಿ ನೇಮಿಸಿ ಅವರಿಂದ 14 ಗಂಟೆ ಗಸ್ತು ಹಾಕಲು ಸೂಚಿಸಲಾಯಿತು. ಸಮಗ್ರ ಕಮಾಂಡ್ ಸೆಂಟರ್ ಕಾರ್ಯಾರಂಭ ಮಾಡಿಸಲಾಯಿತು. ಮುಂದೆ ಅನಾಹುತ ನಡೆಯದಂತೆ ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡ ಬಳಿಕ ಸಫಾರಿ ಪುನಾರಂಭಿಸಲಾಗಿದೆ. ಮಿಗಿಲಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕೇಂದ್ರ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಯನ್ನೂ ಒಳಗೊಂಡ ತಜ್ಞರ ಸಮಿತಿ ರಚಿಸಿ, ಆ ತಜ್ಞರ ಸಮಿತಿಯ ಪ್ರಾಥಮಿಕ ವರದಿಯ ಆಧಾರದಲ್ಲಿ ಸಫಾರಿ ಪುನಾರಂಭ ಮಾಡಲಾಗಿದೆ ಎಂದು ವಿವರಿಸಿದರು.
1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು. ಕಳೆದ 3 ವರ್ಷದ ಹಿಂದೆ ಗಣತಿ ನಡೆದಾಗ ಅಲ್ಲಿ 150 ಹುಲಿ ಇದ್ದವು. ಈಗ ಹುಲಿಗಳ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಕಾಡಿನ ಧಾರಣಾ ಸಾಮರ್ಥ್ಯ ತಿಳಿಯಲು ತಜ್ಞರ ಸಮಿತಿಯಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಕಾಡು ಹೆಚ್ಚುತ್ತಿಲ್ಲ. ಬದಲಾಗಿ ಕ್ಷೀಣಿಸುತ್ತಿದೆ. ಸಫಾರಿ ಪುನಾರಂಭ ಮಾಡಿದ ಬಳಿಕ ಪ್ರತಿಷ್ಠಾನಕ್ಕೆ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದಲ್ಲಿ ಜನಸಂಪರ್ಕ ಸಭೆ ಮಾಡಲು, ಶಿಕ್ಷಣ, ಮೂಲಸೌಕರ್ಯ ಹೆಚ್ಚಳಕ್ಕೆ, ಉದ್ಯೋಗ ಸೃಷ್ಟಿಗೆ ಬಳಸಲು ಸೂಚಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.ಇದನ್ನೂ ಓದಿ: ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ – MBBS ವಿದ್ಯಾರ್ಥಿನಿ ಸಾವು

