– ಚಾಲಕರ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಭರವಸೆ ನೀಡಿದ ಕೇಂದ್ರ ಗೃಹ ಸಚಿವ
ನವದೆಹಲಿ: ಕಷ್ಟಪಟ್ಟು ದುಡಿಯುವವನಿಗೆ ಲಾಭ ಸಿಗಬೇಕು. ಆ್ಯಪ್ ತಯಾರಿಸಿದ ಶ್ರೀಮಂತರಿಗಲ್ಲ ಎಂಬುದು ಭಾರತ್ ಟ್ಯಾಕ್ಸಿಯ (Bharat Taxi) ಪರಿಕಲ್ಪನೆ. ಇಲ್ಲಿ ಚಾಲಕರೇ ಮಾಲೀಕರಾಗಿದ್ದು, 80% ಹಣ ಚಾಲಕರಿಗೆ ಸಂದಾಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಭಾರತ್ ಟ್ಯಾಕ್ಸಿ ಚಾಲಕರೊಂದಿಗೆ ದೆಹಲಿಯಲ್ಲಿ ಸಂವಾದ ನಡೆಸಿದ ಅವರು, ಈ ಸಹಕಾರಿ ಆಧಾರಿತ ರೈಡ್-ಹೇಲಿಂಗ್ ಪ್ಲಾಟ್ಫಾರ್ಮ್ನ ಮೂಲಕ ಚಾಲಕರ ಯೋಗಕ್ಷೇಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಮೂರು ಶಾಲೆಗಳಿಗೆ ಬಾಂಬ್ ಬೆದರಿಕೆ; ತನಿಖೆ ಚುರುಕು
ಫೆಬ್ರವರಿ 5 ರಂದು ಪ್ರಾರಂಭವಾದ ಭಾರತ್ ಟ್ಯಾಕ್ಸಿ ಭಾರತದ ಮೊದಲ ಸಹಕಾರಿ ರೈಡ್-ಹೇಲಿಂಗ್ ಸೇವೆಯಾಗಿದ್ದು, ಸರ್ಕಾರದ ಬೆಂಬಲದೊಂದಿಗೆ ಅಮೂಲ್, ಐಎಫ್ಸಿಒ ಮತ್ತು ನಾಬಾರ್ಡ್ ಸಂಸ್ಥೆಗಳ ಸಹಯೋಗದಿಂದ ಕಾರ್ಯನಿರ್ವಹಿಸುತ್ತದೆ. ಇತರ ಖಾಸಗಿ ಆ್ಯಪ್ಗಳಂತಲ್ಲದೆ, ಇದು ಚಾಲಕರೇ ಮಾಲೀಕರಾಗಿರುವ ಮಾದರಿಯನ್ನು ಅಳವಡಿಸಿಕೊಂಡಿದೆ. ಇದರಿಂದಾಗಿ ಕೆಲಸ ಮಾಡುವವರಿಗೇ ಹೆಚ್ಚಿನ ಲಾಭ ತಲುಪುತ್ತದೆ ಎಂದಿದ್ದಾರೆ.
ಭಾರತ್ ಟ್ಯಾಕ್ಸಿಯಲ್ಲಿ 80% ಆದಾಯ ಅಥವಾ ಲಾಭ ನೇರವಾಗಿ ಚಾಲಕರಿಗೆ ತಲುಪುತ್ತದೆ. ಇಲ್ಲಿ ಯಾವುದೇ ಕಮಿಷನ್ ಇಲ್ಲ. ಕೇವಲ ಕನಿಷ್ಠ ಸದಸ್ಯತ್ವ ಶುಲ್ಕ ಮಾತ್ರ. ಸರ್ಜ್ ಪ್ರೈಸಿಂಗ್ ಇಲ್ಲ, ದರಗಳು ಸ್ಪಷ್ಟವಾಗಿರುತ್ತವೆ. ಚಾಲಕರು 500 ರೂ. ಮಾತ್ರ ಹೂಡಿಕೆ ಮಾಡಿ ಈ ಸಹಕಾರದ ಭಾಗವಾಗಬಹುದು ಎಂದು ತಿಳಿಸಿದ್ದಾರೆ.

ಉದಾಹರಣೆಗೆ, ಭಾರತ್ ಟ್ಯಾಕ್ಸಿ 25 ಕೋಟಿ ರೂ. ಗಳಿಸಿದರೆ, 20% ಕಂಪನಿಯ ಖಾತೆಗೆ (ಚಾಲಕರೇ ಮಾಲೀಕರಾದ್ದರಿಂದ ಅದೂ ಚಾಲಕರ ಭಾಗವೇ) ಹೋಗುತ್ತದೆ. ಉಳಿದ 80% ಚಾಲಕರ ಕಾರ್ಯಾಚರಣೆಗಳ ಆಧಾರದ ಮೇಲೆ (ಉದಾ. ಚಾಲನೆ ಮಾಡಿದ ಕಿ.ಮೀ.) ವಿತರಣೆಯಾಗುತ್ತದೆ. ಇದರಿಂದ ಚಾಲಕರು ಕೇವಲ ಕೂಲಿಯಲ್ಲದೆ ಲಾಭದ ಭಾಗವನ್ನೂ ಪಡೆಯುತ್ತಾರೆ ಎಂದು ಶಾ ವಿವರಿಸಿದರು.
ಹಿಂದೆ ಖಾಸಗಿ ಕಂಪನಿಗಳಲ್ಲಿ ನಿಮ್ಮ ಆದಾಯದ ದೊಡ್ಡ ಭಾಗ ಆ್ಯಪ್ ಮಾಲೀಕರ ಜೇಬಿಗೆ ಹೋಗುತ್ತಿತ್ತು. ಭಾರತ್ ಟ್ಯಾಕ್ಸಿಯಲ್ಲಿ ನೀವೇ ಮಾಲೀಕರು. ಕಷ್ಟಪಟ್ಟು ಕೆಲಸ ಮಾಡುವವನಿಗೆ ಲಾಭ ಸಿಗಬೇಕು, ಮೊದಲ ಮೂರು ವರ್ಷಗಳಲ್ಲಿ ಪ್ಲಾಟ್ಫಾರ್ಮ್ ಬೆಳೆಯಲು ಸಮಯ ಬೇಕು ಚಾಲಕರು ತಾಳ್ಮೆಯಿಂದರಬೇಕು. ಮುಂದೆ ಇದು ದೇಶದ ಹಲವು ರಾಜ್ಯಗಳಿಗೆ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಖಾತೆಗಳು ಪಾರದರ್ಶಕವಾಗಿರುತ್ತವೆ ಮತ್ತು ಚಾಲಕರಿಗೆ ಲಭ್ಯವಿರುತ್ತವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನಾಳೆಯಿಂದ ಸುಂಕ ಸಂಗ್ರಹ ನಿಲ್ಲಿಸಲಿದೆ ಅಮೆರಿಕ – 175 ಶತಕೋಟಿ ಡಾಲರ್ ನಷ್ಟದ ಆತಂಕ
ಭಾರತ್ ಟ್ಯಾಕ್ಸಿ ಸಹಕಾರಿ ತತ್ವಗಳ ಮೇಲೆ ಕಾರ್ಯನಿರ್ವಹಿಸುವುದರಿಂದ ಚಾಲಕರನ್ನು ಶೋಷಣೆ ಮಾಡುವುದಿಲ್ಲ ಎಂದು ಅಮಿತ್ ಶಾ ಒತ್ತಿ ಹೇಳಿದರು. ಇದು ಅಮೂಲ್ ಮಾದರಿಯಂತೆ ಚಾಲಕರನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

