ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್ನಲ್ಲಿ (Pahalgam) ನಡೆದ ಭಯೋತ್ಪಾದಕರ ಪೈಶಾಚಿಕ ದಾಳಿಯಲ್ಲಿ (Terrorist Attack) 13 ಕನ್ನಡಿಗರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಹಲ್ಗಾಮ್ಗೆ ಹೋಗುವ ರಸ್ತೆಯಲ್ಲಿ ಗುಡ್ಡಕುಸಿತವಾಗಿದ್ದೇ ಜೀವ ಉಳಿದಿದೆ.
ಬಾಗಲಕೋಟೆಯ (Bagalkote) ಮಾರವಾಡಿ ಗಲ್ಲಿಯ ನಿವಾಸಿಗಳಾದ ಕಿಶೋರ್ ಕಾಸಟ್, ಸೂರಜ್ ಕಾಸಟ್, ಗಿರೀಶ್ ಕಾಸಟ್, ನಿತೀಶ್ ಬಂಗ್ ಹಾಗೂ ಮಕ್ಕಳು ಸೇರಿದಂತೆ ಒಟ್ಟು 13 ಜನ ಏ.19 ರಂದು ಜಮ್ಮು ಕಾಶ್ಮೀರಕ್ಕೆ ಟ್ರಿಪ್ ಹೋಗಿದ್ದರು. ವೈಷ್ಣೋದೇವಿ ದರ್ಶನ ಮಾಡಿ, ಮಂಗಳವಾರ ಪಹಲ್ಗಾಮ್ಗೆ ಹೊರಟಿದ್ದರು.ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ; ಮಾಹಿತಿ ಕೊರತೆ, ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ: ಸಿಎಂ
ಮಾರ್ಗಮಧ್ಯೆ ಗುಡ್ಡಕುಸಿತವಾಗಿತ್ತು. ಇದರಿಂದ ಪಹಲ್ಗಾಮ್ಗೆ 70 ಕಿ.ಮೀ ಬಳಸಿಕೊಂಡು ಹೋಗಬೇಕಿತ್ತು. ಸುತ್ತುವರೆದು ಹೋಗುತ್ತಿರುವಾಗ ಪ್ರಯಾಣಿಕರಿಗೆ ಮನೆಯವರು ಕರೆ ಮಾಡಿದ್ದು, ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನು ತಿಳಿದು ತಕ್ಷಣ ಪ್ರಯಾಣಿಕರೆಲ್ಲರು ಪಹಲ್ಗಾಮ್ಗೆ ಹೋಗುವುದನ್ನು ನಿಲ್ಲಿಸಿದ್ದಾರೆ.
ಒಂದು ವೇಳೆ ಗುಡ್ಡಕುಸಿತ ಆಗದಿದ್ದರೆ ಪಹಲ್ಗಾಮ್ಗೆ ಬೇಗ ತಲುಪಿ, ಭಾರೀ ಅನಾಹುತ ಆಗುವ ಸಾಧ್ಯತೆಯಿತ್ತು. ಸದ್ಯ ವೈಷ್ಣೋದೇವಿ ಕೃಪೆಯಿಂದಲೇ ಎಲ್ಲರು ಪಾರಾಗಿದ್ದಾರೆ ಎನ್ನಬಹುದು. ಸದ್ಯ ಸೇಫ್ ಆಗಿರುವ ಪ್ರಯಾಣಿಕರು, ಶ್ರೀನಗರದ ರಾಜೋರಿ ಪ್ರದೇಶವನ್ನು ತಲುಪಿದ್ದಾರೆ. ನಂತರ ಅಲ್ಲಿಂದ ಜಮ್ಮು ತಲುಪಿ, ಬಳಿಕ ಬಾಗಲಕೋಟೆಗೆ ವಾಪಸ್ ಮರಳುತ್ತಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಮಾದಕರ ದಾಳಿ ನಡೆದಿದ್ದು, ಮೂವರು ಕನ್ನಡಿಗರು ಬಲಿಯಾಗಿದ್ದಾರೆ.ಇದನ್ನೂ ಓದಿ: ಆರ್ಟಿಕಲ್ 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ: ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ