ರಾಮನಗರ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕುಟುಂಬಕ್ಕೆ ಸೇರಿದ್ದ ಕೇತಗಾನಹಳ್ಳಿ (Kethaganahalli) ಜಮೀನಿನಲ್ಲಿ ಒತ್ತುವರಿ ಭೂಮಿಯನ್ನು ತೆರವು ಮಾಡುವಂತೆ ಹೈಕೋರ್ಟ್ (High Court) ಸೂಚನೆ ನೀಡಿದ್ದ ಬೆನ್ನಲ್ಲೇ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಬಿಡದಿಯ ಕೇತಗಾನಹಳ್ಳಿಯ ಸರ್ವೇ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯಿಂದ ಜಂಟಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇಂದು (ಮಾ.18) ಒತ್ತುವರಿ ತೆರವು ಕಾರ್ಯಾಚರಣೆಗೆ ಕಂದಾಯ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ನನ್ನನ್ನ ಟಾರ್ಗೆಟ್ ಮಾಡೋದಕ್ಕೆ ಕೇತಗಾನಹಳ್ಳಿ ಜಮೀನು ಸರ್ವೆ – ಕುಮಾರಸ್ವಾಮಿ ಕಿಡಿ
ಸ್ಥಳಕ್ಕೆ ಡಿಸಿ ಯಶವಂತ್ ವಿ ಗುರುಕರ್, ಎಎಸ್ಪಿ ಸುರೇಶ್, ಎಎಸ್ಪಿ ರಾಮಚಂದ್ರಯ್ಯ ಭೇಟಿ ನೀಡಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಈ ಹಿಂದೆ ನನ್ನನ್ನು ಟಾರ್ಗೆಟ್ ಮಾಡಲು ಸರ್ಕಾರ ಒತ್ತುವರಿ ಆರೋಪ ಮಾಡ್ತಿದೆ. ಯಾವುದೇ ತನಿಖೆಗೆ ನಾನು ಸಿದ್ಧ. ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.
ಈ ಆರೋಪದ ವಿಚಾರವಾಗಿ ಭೂ ದಾಖಲೆಗಳ ಇಲಾಖೆಗೆ ಕುಮಾರಸ್ವಾಮಿಯವರು ಬರೆದ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕಾನೂನು ಬಾಹಿರವಾಗಿ ನನ್ನನ್ನಲ್ಲಿ ಹೆಚ್ಚುವರಿ ಜಮೀನು ಇದ್ದರೆ ವಶಪಡಿಸಿಕೊಳ್ಳಬಹುದು. ಅಲ್ಲದೇ ಇದರಲ್ಲಿ ಕಳೆದು ಹೋಗಿರುವ ಜಮೀನನ್ನೂ ಹುಡುಕಿಕೊಡಿ. ಸರ್ವೇ ನಂಬರ್ 7ರಲ್ಲಿ 5 ಎಕರೆ 20ಗುಂಟೆ ಜಮೀನು ಖರೀದಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.