ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ: ಹೆಚ್‌ಡಿಕೆ

Public TV
3 Min Read
kumaraswamy 1

ಕೊಪ್ಪಳ: ರಾಜ್ಯದಲ್ಲಿ ಈ ಬಾರಿ ಜೆಡಿಎಸ್ (JDS) ಸಂಪೂರ್ಣ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವೆ. ನಮಗೆ ಪೂರ್ಣ ಬಹುಮತ ಕೊಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದರು.

ಕೊಪ್ಪಳದ (Koppala) ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಪಂಚರತ್ನ ಯಾತ್ರೆಯಲ್ಲಿ (Pancharatna Yatra) ಪಾಲ್ಗೊಂಡು ಅವರು ಮಾತನಾಡಿದರು. ಸಾವಿರಾರು ರೈತರು, ಮಹಿಳೆಯರು ತಮ್ಮ ಕಷ್ಟ ಹೇಳಿಕೊಂಡು ನಮ್ಮ ಬಳಿ ಬರುತ್ತಿದ್ದಾರೆ. ಯುವಕರು ಕೆಲಸ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಜನರು ಮನೆ ಇಲ್ಲ ಎಂದು ನೋವು ಹೇಳಿಕೊಳ್ಳುತ್ತಿದ್ದಾರೆ. ಕೋವಿಡ್ ವೇಳೆ ಮೃತಪಟ್ಟವರ ಕುಟುಂಬಕ್ಕೆ ಇನ್ನೂ ಪರಿಹಾರ ಬಂದಿಲ್ಲ ಎನ್ನುತ್ತಾರೆ. ಅವರ ಕಷ್ಟಕ್ಕೆ ನಾನು ಸ್ಪಂದಿಸುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಮು ದ್ವೇಷದ ಭಾಷಣ ಮಾಡೋರನ್ನು ಗಡಿಪಾರು ಮಾಡಿ: ಖಾದರ್

kumaraswamy1

ಫಸಲ್ ಬಿಮಾ ಯೋಜನೆ ಹೆಸರಲ್ಲಿ ವಿಮಾ ಕಂಪನಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ. ಈ ಹಿಂದೆ ರೈತರ ಆತ್ಮಹತ್ಯೆ ಹೆಚ್ಚಾದವು. ಅವರ ನೋವು ಅರಿತು ರೈತರ ಸಾಲ ಮನ್ನಾ ಮಾಡುವೆ ಎಂದು ಹೇಳಿದ್ದೆ. ನನಗೆ ಪೂರ್ಣ ಬಹುಮತ ಬರಲಿಲ್ಲ. ಆದರೂ ರೈತರ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ನನಗೆ ಒತ್ತಡ ಹಾಕಿದ್ರೂ, ನಿಮ್ಮ ಕಾರ್ಯಕ್ರಮಕ್ಕೆ ಹಣ ಹೊಂದಿಸಿ ಕೊಡುವೆ ಎಂದಿದ್ದೆ. ಆದರೂ ಸರ್ಕಾರ ಕೆಡವಿದರು. ಆ ಮಧ್ಯೆ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ನಂತರ ಬಂದಿರುವ ಬಿಜೆಪಿ ಸರ್ಕಾರ ಇನ್ನೂ 2 ಲಕ್ಷ ಕುಟುಂಬಕ್ಕೆ ಸಾಲ ಮನ್ನಾ ಹಣ ಬಂದಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವೆ ಎಂದರು.

ಪಂಚರತ್ನ ಯೋಜನೆಯಡಿ ಪ್ರತಿ ಗ್ರಾಪಂನಲ್ಲಿ ಆಧುನಿಕ ಶಾಲೆ ಕಟ್ಟುವೆ. ಯುವಕರಿಗೆ ಕೆಲಸ ಕೊಡುವೆ. ಪ್ರತಿ ಗ್ರಾಪಂನಲ್ಲಿ 30 ಬೆಡ್ ಆಸ್ಪತ್ರೆ, ಮೂರು ಸಿಬ್ಬಂದಿ ನೇಮಕ ಮಾಡುವೆ. ಹೆಚ್ಚಿನ ಚಿಕಿತ್ಸೆ ಪಡೆಯುವ ಕುಟುಂಬಕ್ಕೆ 30-35 ಲಕ್ಷ ಮೇಲ್ಪಟ್ಟು ಖರ್ಚಾಗುವ ಕಾಯಿಲೆಗೆ ಸರ್ಕಾರವೇ ಭರಿಸಲಿದೆ. ನನ್ನ ಸರ್ಕಾರ ಅಧಿಕಾರಕ್ಕೆ ಬಂದರೆ ಬಿತ್ತನೆ ಬೀಜಕ್ಕೆ, ಗೊಬ್ಬರ ಖರೀದಿಗೆ ಎಕರೆಗೆ 10 ಸಾವಿರ ರೂ. ಹಾಗೂ 10 ಎಕರೆ ಇದ್ದರೆ 1 ಲಕ್ಷ ರೂ. ರೈತರ ಖಾತೆಗೆ ಹಾಕಿವೆ. 24 ಗಂಟೆ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆ ಮಾಡುವೆ. ಯುವಕರಿಗೆ ತರಬೇತಿ, ಹಣಕಾಸಿನ ನೆರವು ಕಲ್ಪಿಸುವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ರಾಯಚೂರಿನಿಂದ ಸ್ಪರ್ಧಿಸಲು ಆಹ್ವಾನ – ಆಸ್ತಿ ಮಾರಲು ಮುಂದಾದ ಅಭಿಮಾನಿ

ಮನೆಯಿಲ್ಲದ ಕುಟುಂಬಕ್ಕೆ ಮನೆ ಕಟ್ಟಿ ಕೊಡುವೆ. ಹಳ್ಳಿಗಳ ಬದುಕು ಕಂಡಿರುವೆ. ಮತ್ತೆ ಸುವರ್ಣ ಗ್ರಾಮೋದಯದಡಿ ಕುಡಿಯುವ ನೀರು, ಶೌಚಾಲಯ ಅಭಿವೃದ್ಧಿ ಮಾಡುವೆ. ಸ್ತ್ರೀಶಕ್ತಿ ಗುಂಪಿನ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮನ್ನಾ ಮಾಡುವೆ. 65 ವರ್ಷ ಮೇಲ್ಪಟ್ಟವರಿಗೆ 5 ಸಾವಿರ, ವಿಧವೆಯರಿಗೆ 2,500 ಮಾಸಾಶನ ಜಾರಿ ಮಾಡುವೆ. ಪಂಚರತ್ನ ಯೋಜನೆಗಳಿಗೆ 2.50 ಲಕ್ಷ ಕೋಟಿ ಬಜೆಟ್ ಬೇಕು. ಹೊಂದಿಕೆ ಮಾಡುವೆ. ಜಲಧಾರೆ ಯೋಜನೆ ಮಾಡುವೆ. ಐದು ವರ್ಷ ಅಧಿಕಾರ ಕೊಡಿ, ಸ್ಪಷ್ಟ ಬಹುಮತ ಕೊಡಬೇಕು. ನನ್ನ ಸ್ವಾರ್ಥಕ್ಕೆ ಹೋರಾಟ ಮಾಡುತ್ತಿಲ್ಲ. ಜಾತಿ, ಹಣದ ವ್ಯಾಮೋಹಕ್ಕೆ ನಿಮ್ಮ ಮತ ಮಾರಬೇಡಿ. ನನಗೆ ಐದು ವರ್ಷ ಅಧಿಕಾರ ಕೊಡಿ. ಒಂದು ಬಾರಿ ಪರೀಕ್ಷೆ ಮಾಡಿ, ಇಲ್ಲದಿದ್ದರೆ ಪಕ್ಷ ವಿಸರ್ಜನೆ ಮಾಡುವೆ ಎಂದು ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *