ಮಂಡ್ಯ: 9ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಕತ್ತು ಕುಯ್ದು ಹತ್ಯೆ ಮಾಡಿರೋ ಭೀಕರ ಘಟನೆ ಮಂಡ್ಯದಲ್ಲಿ ನಡೆದಿದೆ.
ಪಟ್ಟಣದ ಹೊರ ವಲಯದ ಹೇಮಗಿರಿ ರಸ್ತೆಯ ಸರ್ಕಾರಿ ನೌಕರರ ಕಾಲೋನಿ ಬಳಿ ನಿರ್ಜನ ಪ್ರದೇಶದಲ್ಲಿ ಶಾಲಾ ಬಾಲಕನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ತೇಗನಹಳ್ಳಿಯ ಆಶೀರ್ವಾದ ಅಂಗ್ಲಾ ಮಾದ್ಯಮ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಶಾಂಕ್ ಎಂಬ ವಿದ್ಯಾರ್ಥಿಯೇ ಕೊಲೆಯಾದ ದುರ್ದೈವಿ.
ಶಶಾಂಕ್ ತಾಯಿ ಸುಜಾತ ಬೊಮ್ಮೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ರು. ತಂದೆ ಲೋಕೇಶ್ ವ್ಯವಸಾಯ ಮಾಡಿಕೊಂಡಿದ್ರು. ಶಶಾಂಕ್ ಸೋಮವಾರ ಮಧ್ಯಹ್ನ 3 ಗಂಟೆಯಿಂದ ನಾಪತ್ತೆಯಾಗಿದ್ದ. ಆತನ ಬಳಿಯಿದ್ದ ಮೊಬೈಲ್ ಕೂಡ ನಾಟ್ ರೀಚೆಬಲ್ ಆಗಿತ್ತು. ಇದ್ರಿಂದ ಗಾಬರಿಗೊಂಡ ಮನೆಯವರು ನಿನ್ನೆಯಿಂದ ಶಶಾಂಕ್ ಗಾಗಿ ಹುಡುಕಾಟ ನಡೆಸಿದ್ರು. ಆದ್ರೆ ಇಂದು ಬೆಳಗ್ಗೆ ತಮ್ಮ ಮನೆಯಿಂದ ಕೂಗಳತೆ ದೂರದಲ್ಲೇ ಶಶಾಂಕ್ ಶವವಾಗಿ ಸಿಕ್ಕಿದ್ದಾನೆ.
ಇಂದು ಬೆಳಗ್ಗೆ ಸಾರ್ವಜನಿಕರು ವಾಕ್ ಮಾಡುವಾಗ ಬರ್ಬರವಾಗಿ ಕೊಲೆಯಾಗಿರೋ ವಿದ್ಯಾರ್ಥಿಯ ಮೃತ ದೇಹವನ್ನ ನೋಡಿದ್ದಾರೆ. ತಮ್ಮ ಮಗನ ಮೃತದೇಹ ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಆಗಮಿಸಿರುವ ಕೆಆರ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.