– ಪೆಥಾಯ್ ಚಂಡಮಾರುತದಿಂದಾಗಿ ನೀರು ಪಾಲಾದ ಬೆಳೆ
ಹೈದರಾಬಾದ್: ಪೆಥಾಯ್ ಚಂಡಮಾರುತದಿಂದಾಗಿ ಕರ್ನಾಟಕದಲ್ಲಿ ಮೋಡದ ಜೊತೆಯಲ್ಲಿ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಆಂಧ್ರದಲ್ಲಿ ಭಾರೀ ಮಳೆಯಾಗುತ್ತಿದ್ದ ಪರಿಣಾಮ, ತಾನು ಬೆಳೆದ ಬೆಳೆ ನೀರುಪಾಲದ ದೃಶ್ಯ ಕಂಡ ರೈತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೆಲಯಪುಟ್ಟಿ ತಾಲೂಕಿನ ಕೊಸಮಲಾ ಗ್ರಾಮದ ನಿವಾಸಿ 70 ವರ್ಷದ ಗೊಟ್ಟಿಪಲ್ಲಿ ಚಿನ್ನವಾಡು ಸಾವನ್ನಪ್ಪಿದ ರೈತ. ಸೋಮವಾರ ರಾತ್ರಿ ಗ್ರಾಮದಲ್ಲಿ ಭಾರೀ ಮಳೆಯಾಗಿತ್ತು. ಮಂಗಳವಾರ ಬೆಳಗ್ಗೆ ಚಿನ್ನವಾಡು ತಮ್ಮ ಗದ್ದೆಗೆ ತೆರಳಿದ್ದರು. ಮಳೆಯ ಪರಿಣಾಮ ತಾವು ಬೆಳೆದ ನೆಲಗಡಲೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದ ದೃಶ್ಯ ಕಂಡ ರೈತನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಚಿನ್ನವಾಡು ಮರಣೋತ್ತರ ಶವ ಪರೀಕ್ಷೆ ನಡೆಸಿದ ವೈದ್ಯರು ಇದೊಂದು ಸಹಜ ಸಾವು ಎಂಬ ವರದಿಯನ್ನು ನೀಡಿದ್ದರು. ವರದಿ ಆಧಾರ ಅನ್ವಯ ಅಧಿಕಾರಿಗಳು ರೈತನ ಸಾವಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv