ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ (Harangi Reservoir) ಬಹುತೇಕ ಭರ್ತಿಯಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಜಲಾಶಯದ ಅಣೆಕಟ್ಟೆಯ 4 ಕ್ರೆಸ್ಟ್ ಗೇಟ್ ಗಳ ಮೂಲಕ ಶನಿವಾರ ಸಂಜೆ ಕಾವೇರಿ ನದಿಗೆ ನೀರು ಹರಿಸಲಾಗಿದೆ.
ಮಳೆ ಹೆಚ್ಚಾದ ಕಾರಣ ಏಕಾಏಕಿ ಜಲಾಶಯಕ್ಕೆ 20,000 ಕ್ಯೂಸೆಕ್ ಪ್ರಮಾಣದ ನೀರು ಒಳಹರಿವು ಬಂದ ಹಿನ್ನೆಲೆಯಲ್ಲಿ ಹಾರಂಗಿ ನದಿಗೆ 5,000 ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ನೀರನ್ನು ಹರಿಸಲಾಗುವುದು ಎಂದು ಎಂಜಿನಿಯರ್ಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೈಕೊಟ್ಟ ಮುಂಗಾರು – ಭೂಮಿ ಹದ ಮಾಡಿ ಕಾದು ಕುಳಿತ ಕೋಲಾರದ ರೈತರು
ಶಾಸಕರಾದ ಡಾ.ಮಂಥರ್ ಗೌಡ ಅವರು ವಿಶೇಷ ಪೂಜೆ ಸಲ್ಲಿಸಿ ನೀರು ಬಿಡುಗಡೆಗೆ ಶನಿವಾರ ಚಾಲನೆ ನೀಡಿದ್ದಾರೆ. ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರಾದ ಪುಟ್ಟಸ್ವಾಮಿ ಉಪಸ್ಥಿತರಿದ್ದರು. ಇದನ್ನೂ ಓದಿ: ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ – ಬೆಲೆ ಏರಿಕೆ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಇನ್ನೂ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಉತ್ತರಕನ್ನಡದಲ್ಲಿ ಒಂದೇ ದಿನ 277 ಮಿಲಿಮೀಟರ್ ಮಳೆ ಆಗಿದೆ. ಆಗುಂಬೆಯಲ್ಲಿ 163 ಮಿಲಿಮೀಟರ್ ಮಳೆ ಬಿದ್ದಿದೆ. ಕೊಡಗಿನಲ್ಲಿ ಉತ್ತಮ ಮಳೆ ಆಗ್ತಿದೆ. ಕೇರಳದ ವಯನಾಡಿನಲ್ಲಿ 153 ಮಿಲಿಮೀಟರ್ ವರ್ಷಧಾರೆಯಾಗಿದೆ. ಪರಿಣಾಮ ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿದೆ. ಶನಿವಾರ ಕೆಆರ್ಎಸ್ಗೆ 7,900, ಕಬಿನಿಗೆ 7,000, ಹಾರಂಗಿಗೆ 20,000, ಹೇಮಾವತಿಗೆ 9,362 ಕ್ಯೂಸೆಕ್ ನೀರಿನ ಒಳಹರಿವು ಬಂದಿದೆ. ಹಾರಂಗಿ ಭರ್ತಿಗೆ ಕೆಲವೇ ಅಡಿ ಬಾಕಿ ಇರುವ ಕಾರಣ ಡ್ಯಾಂನ 2 ಕ್ರಸ್ಟ್ ಗೇಟ್ ಓಪನ್ ಮಾಡಲಾಗಿದೆ. 5 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗ್ತಿದೆ.
KRS ನಿಂದ 10 ದಿನಗಳ ಮಟ್ಟಿಗೆ ನಾಲೆಗಳಿಗೆ ಇವತ್ತಿನಿಂದ ನೀರು ಹರಿಸಲಾಗುತ್ತಿದೆ. ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಕೊಯ್ನಾ ಜಲಾನಯನ ಪ್ರದೇಶದಲ್ಲಿ 140 ಮಿಲಿಮೀಟರ್ ಮಳೆ ಆಗಿದ್ದು, ಕೃಷ್ಣಾನದಿಯ ಒಳಹರಿವೂ ಹೆಚ್ಚಾಗಿದೆ. ಆಲಮಟ್ಟಿಗೆ 83,000 ಕ್ಯೂಸೆಕ್ ಒಳಹರಿವಿದೆ. ದೂದ್ಗಂಗಾ ತುಂಬಿ ಹರಿದ ಪರಿಣಾಮ ಕಾರದಗಾ ಗ್ರಾಮದ ಬಂಗಾಲಿ ಬಾಬಾ ಮಂದಿರ ಎಂದಿನಂತೆ ಜಲಾವೃತಗೊಂಡಿದೆ. ಬೀದರ್ನ ಖತರಗಾಂವ್ ಸೇತುವೆ ಮುಳುಗಡೆಯಾಗಿದೆ. ಚಿಂಚೋಳಿಯ ಬೆನಕನಹಳ್ಳಿ ಜಲಾವೃತವಾಗಿದೆ.
ಕಲಬುರಗಿಯಲ್ಲಿ 15 ಮನೆ ಕುಸಿದಿವೆ. ಯಾದಗಿರಿಯಲ್ಲಿ ಭೀಮಾನದಿ ಅಪಾಯದ ಮಟ್ಟ ಮೀರಿದ್ದು, ವೀರಾಂಜನೇಯ, ಕಂಗಳೇಸ್ವರ ದೇಗುಲ ಮುಳುಗಡೆ ಆಗಿವೆ. ಮಡಿಕೇರಿಯಲ್ಲಿ ಅಬ್ಬಿ ಫಾಲ್ಸ್ ಮತ್ತು ಮಾಂದಲ್ಪಟ್ಟಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರಿನಲ್ಲಿ ಭದ್ರಾ ಅಬ್ಬರಕ್ಕೆ ಹೆಬ್ಬಾಳೆ ಸೇತುವೆ ಮುಳುಗಡೆ ಹಂತ ತಲುಪಿದೆ. ಹಾಸನದ ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ.
Web Stories