ಬೆಂಗಳೂರು: ರಾಜ್ಯದಲ್ಲಿಯೂ ಕೋವಿಡ್ ಉಪತಳಿ ಜೆಎನ್.1 ಕಾಣಿಸಿಕೊಂಡಿದೆ. ವಿಶೇಷ ಅಂದ್ರೆ ಅದು ಈಗಾಗಲೇ ಬಂದು ಹೋಗಿದೆ. ಕಾರವಾರದ ಸದಾಶಿವಗಡದ ಯುವಕರೊಬ್ಬರಲ್ಲಿ 15 ದಿನಗಳ ಹಿಂದೆ ಈ ಸೋಂಕು ಪತ್ತೆಯಾಗಿತ್ತು. ಲಸಿಕೆ ಪಡೆದ ಎರಡ್ಮೂರು ದಿನಗಳಲ್ಲಿ ಆತ ಚೇತರಿಸಿಕೊಂಡಿದ್ದಾನೆ. ಈಗ ಆರ್ ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದಿದೆ.
ರಾಜ್ಯದಲ್ಲಿ ಹೊಸದಾಗಿ 722 ಮಂದಿಗೆ ಕೋವಿಡ್ ಟೆಸ್ಟ್ (COVID Test) ನಡೆಸಲಾಗಿದ್ದು, 44 ಜನರದಲ್ಲಿ ಸೋಂಕು ಕಂಡುಬಂದಿದೆ. ಇದ್ರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 79ಕ್ಕೆ ಏರಿದೆ. 17 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ ಆರು ಮಂದಿ ಐಸಿಯುನಲ್ಲಿದ್ದಾರೆ. 62 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೇರಳಕ್ಕೆ ಹೊಂದಿಕೊಂಡಿರುವ ಮೈಸೂರು, ದಕ್ಷಿಣಕನ್ನಡ, ಕೊಡಗಿನ ಗಡಿಭಾಗಗಳ ಚೆಕ್ಪೋಸ್ಟ್ಗಳಲ್ಲಿ ತಪಾಸಣೆಗಳು ಶುರುವಾಗಿವೆ.
ಈ ಮಧ್ಯೆ, ರಾಜ್ಯ ಸರ್ಕಾರ, ಕೇರಳದಲ್ಲಿ ಪ್ರಕರಣ ಹೆಚ್ಚಳ, ಹೊಸವರ್ಷ, ಕ್ರಿಸ್ಮಸ್ ಹಾಗೂ ಚಳಿಗಾಲ ಗಮನದಲ್ಲಿಟ್ಟು ಕೋವಿಡ್ ಗೈಡ್ಲೈನ್ಸ್ ಪ್ರಕಟಿಸಿದೆ. ನಾಲೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳ ಜೊತೆ ಸಭೆ ನಡೆಸಲಿದೆ.. ಗುರುವಾರ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆಯಲಿದೆ.. ಬಳಿಕ ಮಾರ್ಗಸೂಚಿಯಲ್ಲಿ ಇನ್ನಷ್ಟು ಬದಲಾವಣೆಗಳು ಆಗಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಜೆಎನ್ 1 ತಳಿ ಪತ್ತೆ- ಕರ್ನಾಟಕದ ಚೆಕ್ಪೋಸ್ಟ್ಗಳಲ್ಲಿ ಹೈಅಲರ್ಟ್
60 ವರ್ಷ ಮೇಲ್ಪಟ್ಟವರು, ರೋಗಿಗಳು, ಗರ್ಭಿಣಿಯರು, ಬಾಣಂತಿಯರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಹೆಚ್ಚು ಜನಸಂದಣಿ ಇರುವ ಕಡೆ, ಗಾಳಿ ಬೆಳಕು ಕಡಿಮೆ ಇರುವ ಕಡೆ ಹೋಗದಂತೆ ಸೂಚನೆ ನೀಡಲಾಗಿದೆ. ಜ್ವರ, ಕೆಮ್ಮು-ನೆಗಡಿ, ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ಟೆಸ್ಟಿಂಗ್ ಮಾಡಿಸಬೇಕು. ಕೋವಿಡ್ ಸೋಂಕು ಕಂಡುಬಂದಲ್ಲಿ ತಕ್ಷಣವೇ ಮನೆಯಲ್ಲಿಯೇ ಐಸೋಲೇಷನ್ ಆಗಬೇಕು. ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.