ನವದೆಹಲಿ: ವೇಗವಾಗಿ ಬಂದ ಕಾರು ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಪೂರ್ವ ದೆಹಲಿಯ ವಿವೇಕ್ ವಿಹಾರದಲ್ಲಿ ನಡೆದಿದೆ.
ಈ ಘಟನೆಯಲ್ಲಿ ಮಲ್ಕಾಗಂಜ್ ಮೂಲದ 18 ವರ್ಷದ ಪ್ರಬ್ಬೋತ್ ಸಿಂಗ್ ಮತ್ತು ಹರ್ಯಾಣ ಸಿರ್ಸಾ ಮೂಲದ 20 ವರ್ಷದ ರುಬಲ್ ಸಾವನ್ನಪ್ಪಿದ್ದು, ಕಮಲಾ ನಗರ್ ನಿವಾಸಿ ಕೇಶವ್ (21) ಮತ್ತು ಅರ್ಷ್ಪ್ರೀತ್ಗೆ ಗಂಭೀರವಾಗಿ ಗಾಯವಾಗಿದೆ.
ತುಂಬಾ ವೇಗದಲ್ಲಿ ಬಂದ ಹೋಂಡಾ ಸಿಟಿ ಕಾರು ವಿದ್ಯುತ್ ಕಂಬಕ್ಕೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರು ಬಡಿದ ರಭಸಕ್ಕೆ ಕಂಬ ಕೂಡ ಬಾಗಿದ್ದು, ಇಬ್ಬರು ಮೃತ ಪಟ್ಟಿದ್ದಾರೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ಮೇಘನಾ ಯಾದವ್, ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಜಿಟಿಬಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತುಂಬಾ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಚಾಲಕ ತುಂಬಾ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಕಂಬಕ್ಕೆ ಬಡಿದಿದ್ದಾನೆ ಅದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ.