ಬೆಂಗಳೂರು: ಅದೃಷ್ಟ ಅನ್ನೋದು ತಾನೇ ತಾನಾಗಿ ಒಲಿದು ಬರೋದು ಅಂತಾರಲ್ಲಾ? ಅದು ಇಂಥಾದ್ದಕ್ಕೇ ಇರಬೇಕು. ಈ ಹುಡುಗ ನಟಿಸಿರೋ 19 ಏಜ್ ಈಸ್ ನಾನ್ಸೆನ್ಸ್ ಅನ್ನೋ ಚಿತ್ರ ಇತ್ತೀಚೆಗಷ್ಟೇ ಸುದ್ದಿಯಲ್ಲಿದೆ. ಆ ಚಿತ್ರ ಇನ್ನಷ್ಟೇ ತೆರೆಗಾಣಬೇಕಿದೆ. ಅಷ್ಟರಲ್ಲಿಯೇ ಮನುಷ್ ಪಾಲಿಗೆ ತಮಿಳಿನಲ್ಲಿಯೂ ಹೀರೋ ಆಗೋ ಅವಕಾಶ ಅರಸಿ ಬಂದಿದೆ. ಈ ಚಮತ್ಕಾರಕ್ಕೆ ಕಾರಣವಾಗಿರೋದು ಈ ಹುಡುಗನಿಗೆ ಸಿನಿಮಾ ಮೇಲಿರೋ ಅತೀವ ಆಸಕ್ತಿ ಮತ್ತು ಪ್ರತಿಭೆಯ ಕಾರಣದಿಂದಲೇ.
19 ಏಜ್ ಈಸ್ ನಾನ್ಸೆನ್ಸ್ ಚಿತ್ರವನ್ನು ಲೋಕೇಶ್ ನಿರ್ಮಾಣ ಮಾಡಿದ್ದಾರೆ. ಅವರ ಸುಪುತ್ರ ಮನುಷ್ ಇದರಲ್ಲಿ ನಾಯಕನಾಗಿ ನಟಿಸಿದ್ದಾನೆ. ಈಗಿನ್ನೂ ಪ್ರಥಮ ವರ್ಷದ ಬಿಕಾಂ ಪದವಿ ಓದುತ್ತಿರೋ ಮನುಷ್ ಪಾಲಿಗೆ ಓದಿಗಿಂತಲೂ ಸಿನಿಮಾ ಮೇಲೆಯೇ ಆಸಕ್ತಿ ಹೆಚ್ಚು. ಇದನ್ನು ಮನಗಂಡಿದ್ದ ಲೋಕೇಶ್ ಅವರಿಗೆ ನಿರ್ದೇಶಕ ಸುರೇಶ್ ಎಂ ಗಿಣಿ ಈ ಕಥೆ ಹೇಳಿದಾಗ ಅದಕ್ಕೆ ಮಗನೇ ಸೂಕ್ತ ಅನ್ನಿಸಿತ್ತಂತೆ. ಹಾಗೆಂದಾ ಕ್ಷಣ ಲೋಕೇಶ್ ಮಗನನ್ನು ನೇರವಾಗಿ ಹೀರೋ ಮಾಡಲಿಲ್ಲ. ಬದಲಾಗಿ ರಂಗಭೂಮಿ ಪರಿಣಿತರಿಂದ ತರಬೇತಿ ಕೊಡಿಸಿದ್ದರು. ಅದೆಲ್ಲವನ್ನೂ ಅಚ್ಚಕಟ್ಟಾಗಿ ಕಲಿತ ಮನುಷ್ ಚೆಂದಗೆ ಅಭಿನಯಿಸಿದ್ದ. ಆ ಬಲದಿಂದಲೇ ಆತನಿಗೆ ತಮಿಳು ಚಿತ್ರದಲ್ಲಿ ನಾಯಕನಾಗೋ ಅವಕಾಶ ಒಲಿದು ಬಂದಿದೆ.
ಈತನ ಸಿನಿಮಾಸಕ್ತಿ ಮತ್ತು ನಟನೆಯ ಪ್ರತಿಭೆಯನ್ನು ಈ ಸಿನಿಮಾ ಛಾಯಾಗ್ರಾಹಕರಾಗಿರುವ ವೆಟ್ರಿ ಆರಂಭದಿಂದಲೂ ಗಮನಿಸಿಕೊಂಡು ಬಂದಿದ್ದರು. ಅವರು ಅದಾಗಲೇ ತಮಿಳು ಸಿನಿಮಾ ನಿರ್ದೇಶನ ಮಾಡಲು ತಯಾರಾಗಲಾರಂಭಿಸಿದ್ದರು. ಬಳಿಕ ಮನುಷ್ನನ್ನೇ ನಾಯಕನನ್ನಾಗಿಸಿ ತಮ್ಮ ಮೊದಲ ಚಿತ್ರ ನಿರ್ದೇಶನ ಮಾಡೋ ನಿರ್ಧಾರಕ್ಕೂ ಬಂದಿದ್ದರು. ಪ್ರೇಮ ಕಥೆಯಾಧಾರಿತವಾದ ಈ ಕಥೆ ಲೋಕೇಶ್ ಅವರಿಗೂ ಒಪ್ಪಿಗೆಯಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನೇನು 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಬಿಡುಗಡೆಯಾಗುತ್ತಲೇ ಮನುಷ್ ನಟನೆಯ ತಮಿಳು ಸಿನಿಮಾ ಟೇಕಾಫ್ ಆಗಲಿದೆ.