ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 11ನೇ ದಿನಕ್ಕೆ ಕಾಲಿಟ್ಟಿದ್ದು. ಇಂದು ರಾಜ್ಯಾದ್ಯಂತ ಕಾರ್ಮಿಕ ಆಯ್ತುಕರ ಕಚೇರಿಗೆ ಮುತ್ತಿಗೆ ಹಾಕಲು ನೌಕರರು ನಿರ್ಧರಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಧರಣಿ ನಡೆಯಲಿದೆ. ಕಾರ್ಮಿಕ ಆಯ್ತುಕರ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ನೌಕರರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯ ಮಾಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಮುಷ್ಕರ ಆರಂಭವಾಗಿ 11 ದಿನವಾದ್ರೂ ಸರ್ಕಾರ ಸ್ಪಂದಿಸದ ಹಿನ್ನೆಲೆ ಧರಣಿಯನ್ನು ತೀವ್ರಗೊಳಿಸಲು ನೌಕರರು ಮುಂದಾಗಿದ್ದಾರೆ.
ಎಷ್ಟೇ ಅಡ್ಡಿಗಳಿದ್ರೂ ನಾವು ವಿಚಲಿತರಾಗುವುದಿಲ್ಲ. ಮುಖ್ಯಮಂತ್ರಿಗಳು ನಮ್ಮ ಜೊತೆ ಮಾತನಾಡೋಕೆ ಯಾಕೆ ಹಿಂಜರೀತಿದ್ದೀರಿ. ಈಗ ಪಾಸಿಟಿವ್ ಆಗಿದೆ. ಸಾರಿಗೆ ಸಚಿವರಿಗೆ ಮೊಂಡುತನ ಬೇಡ. ಒಂದು ನಿರ್ದಿಷ್ಟ ನಿರ್ಧಾರಕ್ಕೆ ಬನ್ನಿ. ಆಯುಕ್ತರೊಂದಿಗೆ ಮಾತನಾಡುತ್ತೇವೆ ಅಂದಿದ್ದಾರೆ. ಇನ್ನು, ಅವನ್ಯಾರೋ ಕೋಡಿಹಳ್ಳಿ.. ಅವನೊಬ್ಬ 420 ಅಂತ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಅವನನ್ನು ಬಿಟ್ಟು ಮಾತುಕತೆಗೆ ಬನ್ನಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಜಮಖಂಡಿಯಲ್ಲಿ ಮುಷ್ಕರದ ನಡುವೆ ಸಂಚರಿಸಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ, ಬಸ್ ಚಾಲಕ ಅವಟಿ ಕುತ್ತಿಗೆ ಭಾಗಕ್ಕೆ ಬಲವಾಗಿ ಪೆಟ್ಟುಬಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಚಾಲಕ ಮೃತಪಟ್ಟಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳಿರುವ ಸಾರಿಗೆ ಸಚಿವ ಸವದಿ, ತಕ್ಷಣವೇ 30 ಲಕ್ಷ ಪರಿಹಾರ ಮತ್ತು ಒಬ್ಬರಿಗೆ ಕೆಲಸ ಕೊಡೋದಾಗಿ ಸೂಚಿಸಿದ್ದಾರೆ.
ಹಾಸನದಲ್ಲಿ ಸರ್ಕಾರಿ ಬಸ್ ಬರುತ್ತಿದ್ದಂತೆಯೇ ಖಾಸಗಿ ಬಸ್ನಲ್ಲಿದ್ದ ಜನ ಇಳಿದು ಕೆಎಸ್ಆರ್ಟಿಸಿ ಹತ್ತುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಖಾಸಗಿ ಬಸ್ನವರು ವಾಗ್ವಾದ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದ ಕೈ ಸ್ವಾಧೀನ ಕಳೆದುಕೊಂಡ ಬಿಎಂಟಿಸಿ ಡ್ರೈವರ್ ಗೆ ಒತ್ತಡ ಹಾಕಿ ಕೆಲಸಕ್ಕೆ ಕರೆಸಿಕೊಂಡಿದ್ದಾರೆ. ಆ ಡ್ರೈವರ್ ಒಂದೇ ಕೈಯಿಂದ ಬಸ್ ಓಡಿಸಿದ್ದಾರೆ.