– ಹಿಮಪಾತದಲ್ಲಿ 5 ಗಂಟೆ ನಡೆದ ಸೈನಿಕರು
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಅಲ್ಲಿನ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ಜನ ಹಿಮದಡಿಯೇ ಸಿಲುಕುತ್ತಿದ್ದಾರೆ. ಇದೇ ರೀತಿ ಹಿಮದಲ್ಲಿ ಸಿಲುಕಿದ್ದ 10 ಜನರನ್ನು ನಮ್ಮ ವೀರ ಯೋಧರು ರಕ್ಷಿಸಿದ್ದಾರೆ.
ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿರುವುದರಿಂದ ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ರಸ್ತೆಗಳು ಬಂದ್ ಆಗಿವೆ. ಹೀಗಾಗಿ ಸಿಂಥಾನ್ ಪಾಸ್ ಬಳಿ ಚಿಂಗಮ್ ಮಾರ್ಗದ ಎನ್ಎಚ್-244 ನಲ್ಲಿ ಸಿಲುಕಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸೈನಿಕರು ಹಾಗೂ ಜಮ್ಮು ಕಾಶ್ಮೀರ ಪೊಲೀಸರು ತಂಡ ಅವರನ್ನು ರಕ್ಷಿಸಿದೆ.
ತೀವ್ರ ದುಸ್ತರ ದಾರಿಯಲ್ಲಿ ಸಾಗಿ 10 ಜನರನ್ನು ಯೋಧರು ರಕ್ಷಿಸಿದ್ದು, ರಾತ್ರಿ ಇಡೀ ಬರೋಬ್ಬರಿ 5 ಗಂಟೆಗಳ ಕಾಲ ನಡೆದುಕೊಂಡು ಹೋಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮಂಜು ಆವರಿಸಿದೆ, ಕತ್ತಲಾಗಿದೆ, ದಾರಿ ಸಹ ತಿಳಿಯುತ್ತಿಲ್ಲ. ಇಂತಹ ದುಸ್ತರ ಸ್ಥಿತಿಯಲ್ಲಿ ಸೈನಿಕರು ಕಾರ್ಯಾಚರಣೆ ನಡೆಸಿ 10 ಜನರನ್ನು ರಕ್ಷಿಸಿದ್ದಾರೆ.
ರಕ್ಷಿಸಿದ 10 ಜನ ನಾಗರಿಕರನ್ನು ಸಿಂಥಾನ್ ಮೈದಾನಕ್ಕೆ ಕರೆ ತರಲಾಗಿದ್ದು, ಅವರಿಗೆ ಆಹಾರ ಹಾಗೂ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಜಮ್ಮು ಕಾಶ್ಮೀರದ ಬಹುತೇಕ ಭಾಗಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದ ಮಳೆ ಹಾಗೂ ಹಿಮಪಾತವಾಗುತ್ತಿದೆ.
ಗುಲ್ಮಾರ್ಗ್ ಹಾಗೂ ಪಹಲ್ಗಮ್ ನಂತರ ಗಿರಿಧಾಮಗಳು ಸೇರಿದಂತೆ ಕಾಶ್ಮೀರ ಕಣಿವೆಯ ಮೇಲ್ಭಾಗದಲ್ಲಿ ಹೆಚ್ಚು ಹಿಮಪಾತವಾಗುತ್ತಿದೆ. ಬಹುತೇಕ ಬಯಲು ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ವಿಪರೀತ ಮಳೆಯಾಗಿದೆ. ಅಧಿಕೃತ ಮೂಲಗಳ ಪ್ರಕಾರ ಶ್ರೀನಗರದಲ್ಲಿ ಕಳೆದ ಸೋಮವಾರ 3.7 ಮಿ.ಮೀ. ಮಳೆಯಾಗಿದೆ. ಮಾತ್ರವಲ್ಲದೆ ರಾತ್ರಿ ವೇಳೆ 2.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಖಾಜಿಗುಂಡ್ನ ಕಾಶ್ಮೀರದ ಗೇಟ್ವೇ ಬಳಿ 16.2 ಮಿ.ಮೀ. ಪಹಲ್ಗಮ್ 15.0 ಮಿ.ಮೀ. ಮಳೆ ಸುರಿದರೆ, 10 ಮಿ.ಮೀ.ಹಿಮಪಾತವಾಗಿದೆ. ಗುಲ್ಮಾರ್ಗ್ ಬಳಿ ಮಳೆ 30.6 ಮಿ.ಮೀ ಮಳೆ ಹಾಗೂ ಹಿಮಪಾತವಾಗಿದೆ. ಮುಂದಿನ 24 ಗಂಟೆಗಳ ನಂತರ ಶುಷ್ಕ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.