ಬೆಂಗಳೂರು: ಶಿರಾ ಕ್ಷೇತ್ರದಲ್ಲಿ 15 ಸಾವಿರ ಮತಗಳ ಅಂತರದಿಂದ ನಾವು ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ಕ್ಷೇತ್ರದಲ್ಲಿ ಈಗ 17ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರು ಸುಮಾರು 5,500 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇನ್ನು ಕೇವಲ 6 ಸುತ್ತಿನ ಮತ ಎಣಿಕೆ ಬಾಕಿ ಇದೆ. ನಮಗೆ ವಿಶ್ವಾಸವಿದೆ, ಬಿಜೆಪಿ ಅಭ್ಯರ್ಥಿ ಸುಮಾರು 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ನೆಕ್ಟ್ ಟು ನೆಕ್ಟ್ ಫೈಟ್ ಹಂತ ಮುಗಿದಿದೆ, ಈಗ ಬಿಜೆಪಿ ಮುನ್ನಡೆಯಲ್ಲಿದೆ. 15 ಸಾವಿರ ಮತಗಳ ಅಂತರದಲ್ಲಿ ಬಿಜೆಪಿಯವರು ಗೆಲ್ಲುವುದು ಖಚಿತ ಎಂದರು.
ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದೇವೆ. ಯಾರು ಯಾವ ಕ್ಷೇತ್ರದ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ರಾಜ್ಯಾಧ್ಯಕ್ಷರು ತಿಳಿಸುತ್ತಾರೆ. ಅದನ್ನು ನಾವು ನಿಭಾಯಿಸುತ್ತೇವೆ. ಆದರೆ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವುದೇ ಗುರಿಯಾಗಿದೆ. ಮುಂದಿನ ಚುನಾವಣೆಗಳಲ್ಲಿ ಸಹ ಗೆಲುವು ಸಾಧಿಸುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.
ಆರ್ಆರ್ ನಗರ ಉಪ ಚುನಾವಣೆ ಕುರಿತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದವರು ಬೊಬ್ಬೆ ಹೊಡೆಯುತ್ತಿದ್ದರು. ಸಾಕಷ್ಟು ಪ್ರಚಾರವನ್ನು ಸಹ ಮಾಡಿದ್ದರು. ಆದರೆ ಕ್ಷೇತ್ರದ ಪತದಾರರು ಬಿಜೆಪಿಯನ್ನು ಎತ್ತಿ ಹಿಡಿದ್ದಾರೆ. ನಮ್ಮ ಅಭ್ಯರ್ಥಿ ಮುನಿರತ್ನ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ನಾಯಕರು ಇದರಿಂದ ತುಂಬಾ ಸಂತಸಗೊಂಡಿದ್ದಾರೆ. ಅಲ್ಲದೆ ಬೆಂಗಳೂರಲ್ಲಿ ಬಿಜೆಪಿ ಶಕ್ತಿ ವೃದ್ಧಿಸಿದಂತಾಗಿದೆ ಎಂದು ತಿಳಿಸಿದರು.