– ದಿನೇಶ್ ಕಲ್ಲಹಳ್ಳಿ ಬಗ್ಗೆ ಮೃದು ಧೋರಣೆ
ಬೆಂಗಳೂರು: ವೀಡಿಯೋ ಅಪ್ಲೋಡ್ ಮಾಡಲು 15 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಇದೊಂದು ಹನಿಟ್ರ್ಯಾಪ್ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ದಿನೇಶ್ ಕಲ್ಲಹಳ್ಳಿ ಕೇಸ್ ಹಿಂಪಡೆದ ನಂತರ ಸುದ್ದಿಗೋಷ್ಠಿ ನಡೆಸಿದ ಬಾಲಚಂದ್ರ ಜಾರಕಿಹೊಳಿ, ಈ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಸಂತ್ರಸ್ಥ ಮಹಿಳೆ ಅಂತ ಕರೆಯಬೇಡಿ. ಕಲ್ಲಹಳ್ಳಿ ದೂರು ದಾಖಲಿಸುವ ಮುನ್ನವೇ ಮೂರು ಗಂಟೆ ಮೊದಲು ರಷ್ಯಾದಲ್ಲಿ ವೀಡಿಯೋ ಅಪ್ಲೋಡ್ ಮಾಡಲಾಗಿತ್ತು. ಜಾರಕಿಹೊಳಿ ಕುಟುಂಬದ ಹೆಸರು ಹಾಳು ಮಾಡಲು ಪ್ಲಾನ್ ಮಾಡಲಾಗಿದೆ. ಹಾಗಾಗಿ ಈ ಸಂಬಂಧ ಸಿಬಿಐ ತನಿಖೆಗೆ ಮುಖ್ಯಮಂತ್ರಿಗಳು ನೀಡಬೇಕು. ರಮೇಶ್ ಜಾರಕಿಹೊಳಿ ಅವರು ಮನೆಯಿಂದ ಹೊರ ಬಂದು ದೂರು ದಾಖಲಿಸಬೇಕು. ನಮಗೆ ದೂರು ನೀಡಲು ಅನುಮತಿ ನೀಡಬೇಕು ಎಂದು ಸೋದರನಲ್ಲಿ ಮನವಿ ಮಾಡಿಕೊಂಡರು.
ನಮ್ಮ ಮೂಲಗಳ ಪ್ರಕಾರ ಮಹಿಳೆ ಮುಂದೆ ತನ್ನ ಭವಿಷ್ಯದ ಬಗ್ಗೆ ಆ ಕಾಣದ ಕೈಗಳಿಗೆ ಕೇಳಿದಾಗ ಆಕೆಗೆ 50 ಲಕ್ಷ ನಗದು ಮತ್ತು ದುಬೈನಲ್ಲಿ ಕೆಲಸ ಕೊಡಿಸೋದಾಗಿ ಆಮಿಷ ನೀಡಿದ್ದಾರೆ. 15 ಕೋಟಿ ಹಣ ವ್ಯಯ ಮಾಡಿ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಮಹಿಳೆ ಹಿಂದೆ ಇಬ್ಬರು, ಇಬ್ಬರ ಹಿಂದೆ ಮೂವರು ಮತ್ತು ಮೂವರ ಹಿಂದೆ ನಾಲ್ಕು ಜನ ವ್ಯವಸ್ಥಿತವಾಗಿ ವೀಡಿಯೋ ಹರಿಬಿಟ್ಟಿದ್ದಾರೆ. ಆದ್ರೆ ವೀಡಿಯೋ ಅಪ್ಲೋಡ್ ಮಾಡಿದವರ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದರು.
ಕಲ್ಲಹಳ್ಳಿ ಬಗ್ಗೆ ಮೃದುಧೋರಣೆ: ಸಿಡಿ ಬಿಡುಗಡೆಯಾದಾಗ ದಿನೇಶ್ ಕಲ್ಲಹಳ್ಳಿ ವಿರುದ್ಧ ಗುಡುಗಿದ್ದ ಬಾಲಚಂದ್ರ ಜಾರಕಿಹೊಳಿ ಇಂದು ಮೃದುಧೋರಣೆ ತೋರಿದ್ದು ಕಾಣಿಸಿತು. ಕಲ್ಲಹಳ್ಳಿ ಅವರಿಗೂ ಪೂರ್ಣ ಮಾಹಿತಿ ಇಲ್ಲ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಕಲ್ಲಹಳ್ಳಿ ಅವರನ್ನ ಸಹ ಈ ಪ್ರಕರಣದಲ್ಲಿ ಟ್ರ್ಯಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ ಎಂದರು. ಕಲ್ಲಹಳ್ಳಿ ಕೇಸ್ ಹಿಂಪಡೆದ ಬಗ್ಗೆ ನಮ್ಮ ವಕೀಲರ ಜೊತೆ ಚರ್ಚಿಸಿ ಕಾನೂನಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.