ನವದೆಹಲಿ: ಬ್ಯಾಂಕ್ಗಳಿಗೆ ವಂಚಿಸಿದ ಆರೋಪ ಹೊತ್ತು ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯ, ತನ್ನ ಮಕ್ಕಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮರು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಆದೇಶ ಕಾಯ್ದಿರಿಸಿದೆ.
2017ರ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಮರು ವಿಚಾರಣೆಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಯು.ಯು ಲಲಿತ್ ಹಾಗೂ ನ್ಯಾ. ಅಶೋಕ್ ಭೂಷಣ್ ನೇತೃತ್ವದ ದ್ವಿ-ಸದಸ್ಯ ಪೀಠ ಶೀಘ್ರದಲ್ಲಿ ಅಂತಿಮ ತೀರ್ಪು ನೀಡಲಿದೆ.
ಬ್ಯಾಂಕುಗಳಿಗೆ ವಂಚನೆ ಆರೋಪದಲ್ಲಿ ಅಪರಾಧಿ ಎಂದು ಸಾಬೀತಾದ ಬಳಿಕ ಉದ್ಯಮಿ ವಿಜಯ್ ಮಲ್ಯ ತನ್ನ ಮಕ್ಕಳಾದ ಸಿದಾರ್ಥ ಮಲ್ಯ ಮತ್ತು ಲಿಯಾನಾ, ತಾನ್ಯ ಮಲ್ಯಗೆ 40 ಮಿಲಿಯನ್ ಡಾಲರ್ ಹಣವನ್ನು ವರ್ಗಾಯಿಸಿದ್ದರು.
ಇದನ್ನು ಪ್ರಶ್ನಿಸಿ ಬ್ಯಾಂಕುಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2017 ರಲ್ಲಿ ಇದೊಂದು ಅಕ್ರಮ ಹಣ ವರ್ಗಾವಣೆ ಎಂದು ತೀರ್ಪು ನೀಡಿತ್ತು ಮತ್ತು ಹಣ ಹಿಂದುರಿಗಿಸಲು ವಿಜಯ್ ಮಲ್ಯ ಮಕ್ಕಳಿಗೆ ಸೂಚನೆ ನೀಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಜಯ್ ಮಲ್ಯ ಸುಪ್ರೀಂಕೋರ್ಟ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ವೇಳೆ ಕಳೆದ ಮೂರು ವರ್ಷಗಳಿಂದ ಮಲ್ಯ ಸಲ್ಲಿಸಿದ ಪರಿಶೀಲನಾ ಅರ್ಜಿಯನ್ನು ಏಕೆ ಪಟ್ಟಿ ಮಾಡಲಾಗಿಲ್ಲ ಎಂದು ಜೂನ್ 19 ರಂದು ನ್ಯಾಯಾಲಯವು ತನ್ನದೇ ನೋಂದಾವಣಿ ಕಚೇರಿಯಿಂದ ವಿವರಣೆಯನ್ನು ಕೋರಿತು. ಈ ಸಮಯದಲ್ಲಿ ಈ ಪ್ರಕರಣವನ್ನು ಏಕೆ ಪಟ್ಟಿ ಮಾಡಲಾಗಿಲ್ಲ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಿಂದ ಈಗ ವಿವರಣೆ ಕೋರಿದೆ. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಹೆಸರನ್ನು ಸಹ ಕೇಳಿದೆ.