ವಿಜಯಪುರ: ಬಿಸಿಲನಾಡು ವಿಜಯಪುರ ಜಿಲ್ಲೆಯಲ್ಲಿಂದು ವರುಣ ಆರ್ಭಟ ಭಾರೀ ಸದ್ದು ಮಾಡಿದೆ. ನಗರ ಸೇರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ಬಿಟ್ಟು ಬಿಡದೇ ಸತತ ಎರಡು ಗಂಟೆಗಳ ಕಾಲ ಮಳೆ ಸುರಿದಿದೆ. ಮುದ್ದೇಬಿಹಾಳ, ಸಿಂದಗಿ, ಇಂಡಿ, ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆರಾಯ ಆರ್ಭಟಿಸಿದ್ದಾನೆ.
ಈಗಾಗಲೇ ಮುಂಗಾರು ಬಿತ್ತನೆಯಲ್ಲಿ ಜಿಲ್ಲೆಯ ರೈತರು ತೊಡಗಿದ್ದಾರೆ. ಈ ತಿಂಗಳ ಪ್ರಾರಂಭದಿಂದಲೇ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿದ್ದು, ವರುಣನಿಗೆ ರೈತರು ಬಹುಪರಾಕ್ ಎಂದಿದ್ದಾರೆ. ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಾರ ಭಾರೀ ಮಳೆ- ರೆಡ್ ಅಲರ್ಟ್ ಘೋಷಣೆ
ಬಾಳೆ ಬೆಳೆ ನಾಶಮಾಡಿದ ರೂತ ಮಹಿಳೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ಬಾಳೆ ಮಾರಾಟವಾಗದ್ದಕ್ಕೆ ತಾನೇ ಬೆಳೆದ ಬೆಳೆಯನ್ನು ರೈತ ಮಹಿಳೆ ನಾಶ ಮಾಡಿದ್ದಾರೆ. ಮೂರು ಲಕ್ಷ ಖರ್ಚು ಮಾಡಿ, 5 ಎಕರೆಯಲ್ಲಿ ಬಾಳೆ ಬೆಳೆಯನ್ನ ಸಂಗಮ್ಮ ಹಿರೇಮಠ ಬೆಳೆದಿದ್ದರು. ಆದರೆ ಬಾಳೆ ಫಸಲು ಬಂದರೂ ಮಾರಾಟವಾಗಲಿಲ್ಲ. ಲಾಕ್ಡೌನ್ ನಿಂದ ಉತ್ತಮ ಬೆಲೆ ಸಿಗಲೆ ಇಲ್ಲ. ಕೇವಲ 2 ರೂ ಮಾರುಕಟ್ಟೆಯಲ್ಲಿ ಬೆಲೆ ಕೇಳುತ್ತಿದ್ದರು. ನಂತರ ಮಳೆ ಹೊಡೆತಕ್ಕೆ ಬಾಳೆ ಬೆಳೆ ಕೊಳೆತು ಹೋಗಿದೆ. ಹೀಗಾಗಿ ಜೆಸಿಬಿ ಮೂಲಕ ಸಂಗಮ್ಮ ಸಂಪೂರ್ಣ ಬಾಳೆ ಬೆಳೆ ನಾಶ ಮಾಡಿದ್ದಾರೆ. ರಾಜ್ಯ ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ರೈತ ವರ್ಗ ಒತ್ತಾಯಿಸಿದೆ.
ಶನಿವಾರ ದಕ್ಷಿಣ ಕನ್ನಡ ಮಂಗಳೂರು ಸೇರಿದಂತೆ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲೂ ಬಿರುಗಾಳಿ ಸಹಿತ ಭಾರೀ ಮಳೆಯ ಕೆಲ ಗಂಟೆಗಳ ಕಾಲ ಮಳೆ ಅಬ್ಬರಿಸಿದೆ. ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮೂರು ದಿನಗಳ ಕಾಲ ಜಿಲ್ಲಾದ್ಯಂತ ಎಲ್ಲೋ ಅಲರ್ಟ್ ಘೋಷಿಸಿಲಾಗಿತ್ತು. ಗಾಳಿಯ ರಭಸ ಹೆಚ್ಚಾಗಿದ್ದರಿಂದ ನದಿ ಹಾಗೂ ಸಮುದ್ರ ತೀರದ ಜನ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ಕೂಡ ನೀಡಿದೆ. ಇದನ್ನೂ ಓದಿ: ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ