ಬೆಳಗಾವಿ: ಕಳೆದ 52 ದಿನಗಳಿಂದ ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ವಲಸೆ ಜಾನುವಾರುಗಳಿಗೆ ಭಾರಿ ತೊಂದರೆಯಾಗಿದೆ. ಬೆಂಗಳೂರುನಿಂದ ಮಹಾರಾಷ್ಟ್ರದ ಪುಣೆಗೆ ಹೊರಟಿದ್ದ 10 ಒಂಟೆಗಳು ಬೆಳಗಾವಿ ನಗರದಲ್ಲಿ ಸಿಲುಕಿಕೊಂಡಿದ್ದವು. ತಿನ್ನಲು ಮೇವು ಇಲ್ಲದ್ದಕ್ಕೆ ಎರಡು ಒಂಟೆಗಳು ಅಸುನೀಗಿದ ಘಟನೆ ನಗರದಲ್ಲಿ ನಡೆದಿದೆ.
ಮಾಲೀಕರು ರಾಜಸ್ಥಾನ ಮೂಲದವರಾಗಿದ್ದು, ಒಂಟೆಗಳ ದಾರುಣ ಮರಣದಿಂದ ಕಣ್ಣೀರಿಡುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ತೆರಳಬೇಕೆಂದರೆ ಅಲ್ಲಿಯೂ ಲಾಕ್ಡೌನ್ ಇದ್ದು, ಇಲ್ಲಿ ಒಂಟೆಗಳಿಗೆ ತಿನಿಸಲು ಮೇವಿಲ್ಲದೇ ಮಾಲೀಕರು ಪರದಾಡುತ್ತಿದ್ದಾರೆ.
ಲಾಕ್ಡೌನ್ನಿಂದಾಗಿ ಹಲವು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಅದೇ ರೀತಿ ಒಂಟೆಗಳಿಗೆ ಸಹ ಮೇವಿಲ್ಲದೆ ಸಂಕಷ್ಟ ಎದುರಾಗಿದೆ. ಹೀಗಾಗಿ 2 ಒಂಟೆಗಳು ದಾರುಣವಾಗಿ ಸಾವನ್ನಪ್ಪಿವೆ. ಘಟನೆ ಕುರಿತು ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದು, ಒಂಟೆ ಮಾಲೀಕರು ಕಣ್ಣೀರಿಡುತ್ತಿದ್ದಾರೆ.