– ನಾನು ಸುಶಾಂತ್ನನ್ನು ಭೇಟಿ ಮಾಡಿದ್ದೇ ಎರಡು ಬಾರಿ
– ನಾನು ಸ್ವಜನಪಕ್ಷಪಾತವನ್ನು ಬೆಂಬಲಿಸುವುದಿಲ್ಲ
ಮುಂಬೈ: ನಟಿ ರಿಯಾ ಚಕ್ರವರ್ತಿಗೆ ನಾನು ಮೃತ ನಟ ಸುಶಾಂತ್ ಸಿಂಗ್ ರಜಪೂತ್ನನ್ನು ಬಿಟ್ಟು ಬಾ ಎಂದು ಹೇಳಿಲ್ಲ ಎಂದು ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಹೇಳಿದ್ದಾರೆ.
ಸುಶಾಂತ್ ಆಹ್ಮಹತ್ಯೆ ಮಾಡಿಕೊಂಡು ಒಂದು ತಿಂಗಳು ಆಗಿದ್ದು, ಅವರ ಸಾವಿನ ಸುತ್ತ ಹಲವು ಅನುಮಾನ ಪ್ರಶ್ನೆ ಎದ್ದಿದೆ. ನಿನ್ನೆ ಸುಶಾಂತ್ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ. ಈಗ ಮುಂಬೈ ಪೊಲೀಸರು ಮಹೇಶ್ ಭಟ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ನಾನು ಸುಶಾಂತ್ನನ್ನು ಕೇವಲ ಎರಡು ಬಾರಿಯಷ್ಟೇ ಭೇಟಿ ಮಾಡಿದ್ದೇನೆ ಎಂದು ಮಹೇಶ್ ಭಟ್ ಹೇಳಿದ್ದಾರೆ.
ನಾನು ಸ್ವಜನಪಕ್ಷಪಾತವನ್ನು ಬೆಂಬಲಿಸುವುದಿಲ್ಲ. ಬಹಳಷ್ಟು ಹೊಸಬರಿಗೆ ನನ್ನ ಸಿನಿಮಾನದಲ್ಲಿ ಚಾನ್ಸ್ ಕೊಟ್ಟಿದ್ದೇನೆ. 2018ರಲ್ಲಿ ಮತ್ತು ಇತ್ತೀಚೆಗೆ 2020ರಲ್ಲಿ ಎರಡೇ ಬಾರಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಭೇಟಿ ಮಾಡಿದ್ದೇನೆ. ಜೊತೆಗೆ ನಟಿ ರಿಯಾ ಚಕ್ರವರ್ತಿಗೆ ನೀನು ಸುಶಾಂತ್ ಸಿಂಗ್ ರಜಪೂತ್ ಅವರನ್ನು ಬಿಟ್ಟು ಬಾ ಎಂದು ಹೇಳಿಲ್ಲ. ಸುಮ್ಮನೇ ನನ್ನ ಮೇಲೆ ಗೂಬೆ ಕುರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆ. ಇದನ್ನೂ ಓದಿ: ಸುಶಾಂತ್ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸ್ತಿದ್ದ ರಿಯಾ
ಈ ಹಿಂದೆ ಮಾತನಾಡಿದ್ದ ಮಹಾರಾಷ್ಟ್ರದ ಗೃಹಮಂತ್ರಿ ಅನಿಲ್ ದೇಶ್ಮುಖ್, ನಾವು ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ. ನಾವೇ ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು. ಜೊತೆಗೆ ನಿರ್ದೇಶಕ ಮಹೇಶ್ ಭಟ್ ಮತ್ತು ಕರಣ್ ಜೋಹರ್ ಮ್ಯಾನೇಜರ್ ಅವರನ್ನು ಕರೆಸಿ ವಿಚಾರಣೆ ಮಾಡುತ್ತೇವೆ. ಅವಶ್ಯಕತೆ ಬಿದ್ದರೆ ಕರಣ್ ಜೋಹರ್ ಅವರನ್ನು ಠಾಣೆಗೆ ಕರೆಸಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು.
ಸುಶಾಂತ್ ಸಿಂಗ್ ರಜಪೂತ್ ಕಳೆದ ಜೂನ್ 14ರಂದು ಮುಂಬೈನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ನಂತರ ಅವರ ಸಾವಿನ ಸುತ್ತ ಹಲವಾರು ಅನುಮಾನಗಳು ಮೂಡಿದ್ದವು. ಈಗ ಸುಶಾಂತ್ ಸಾವನ್ನಪ್ಪಿ ಒಂದು ತಿಂಗಳ ನಂತರ ಅವರ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ. ಜೊತೆಗೆ ಪಾಟ್ನಾ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ರಿಯಾ ತನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಓವರ್ ಡೋಸ್ ಮಾತ್ರೆ ಕೊಟ್ಟಿದ್ದಾಳೆ: ಸುಶಾಂತ್ ತಂದೆ ಗಂಭೀರ ಆರೋಪ
ಈಗಾಗಲೇ ನಟಿ ರಿಯಾ ಚಕ್ರವರ್ತಿಯವರನ್ನು ಮುಂಬೈ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರು ಬಾಲಿವುಡ್ನಲ್ಲಿರುವ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದಾರೆ. ಬಾಲಿವುಡ್ ಮೂವಿ ಮಾಫಿಯಾ ಅವರನ್ನು ಪ್ಲಾನ್ ಮಾಡಿ ಮರ್ಡರ್ ಮಾಡಿದೆ ಎಂದು ನಟಿ ಕಂಗನಾ ರಣಾವತ್ ಅವರು ಆರೋಪಿಸಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಅವರಿಗೂ ಸಮನ್ಸ್ ನೀಡಿದ್ದು, ಅವರನ್ನು ಕೂಡ ವಿಚಾರಣೆ ಮಾಡಲಾಗುತ್ತದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.