ಲಕ್ನೋ: ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ನಿಕಮ್ಮೆ ಸಂಸಾದ್(ಅಸಮರ್ಥ ಸಂಸದ) ಎಂದು ಹೇಳಿ ವ್ಯಂಗ್ಯವಾಡಿದ್ದಾರೆ.
ಕೇರಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿಚಾರವಾಗಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ಉತ್ತರ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸೋತ ಬಳಿಕ ಕೇರಳದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಹಲವಾರು ವರ್ಷಗಳಿಂದ ರಾಹುಲ್ ಧರಿಸಿದ್ದ ನಾಟಕದ ಮುಖವಾಡ ಇದೀಗ ಕಳಚಿ ಬಿದ್ದಿದೆ ಹಾಗೂ ಕಾಂಗ್ರೆಸ್ಸಿಗರ ಅಸಲಿ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾನು 15 ವರ್ಷ ಉತ್ತರ ಭಾರತದಲ್ಲಿ ಸಂಸದನಾಗಿ ಬೇರೆ ರೀತಿಯ ರಾಜಕೀಯಕ್ಕೆ ಒಗ್ಗೂಡಿಕೊಂಡಿದ್ದೆ. ಆದರೆ ಕೇರಳ ರಾಜಕೀಯ ನನ್ನ ಉತ್ಸಾಹ ಹೆಚ್ಚಿಸಿದೆ ಎಂದು ಹೇಳಿದ್ದರು. ಈ ವಿಚಾರವನ್ನು ಇಟ್ಟುಕೊಂಡು ಈಗ ಬಿಜೆಪಿ ನಾಯಕರು ರಾಹುಲ್ ಗಾಂಧಿ ಉತ್ತರಪ್ರದೇಶವನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಅಮೇಥಿ ಜನರು ಅವರಿಗೆ ಎಲ್ಲ ರೀತಿಯ ಅವಕಾಶವನ್ನು ನೀಡಿದರೂ ಕೂಡ, ಅವರು ಅಮೇಥಿ ಲೋಕಸಭಾ ಸ್ಥಾನ ಉಳಿಸಿಕೊಳ್ಳಲು ಕೇರಳಕ್ಕೆ ಓಡಿ ಹೋದರು. ಹಲವು ವರ್ಷಗಳಿಂದ ಅಮೇಥಿ ಜನತೆ ನಿಕಮ್ಮೆ(ಅಸಮರ್ಥ) ಸಂಸಾದ್ನನ್ನು ಸಹಿಸಿಕೊಂಡಿದ್ದರು. ಆದರೆ ಇದೀಗ ಉತ್ತರ ಭಾರತದಲ್ಲಿ ರಾಹುಲ್ ಗೆಲ್ಲಲು ವಿಫಲವಾದ ಬಳಿಕ ರಾಹುಲ್ ಅಮೇಥಿ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ಕಿಡಿ ಕಾರಿದರು.
ಇಷ್ಟು ವರ್ಷ ಅಮೇಥಿ ಜನತೆ ರಾಹುಲ್ ಗಾಂಧಿ ಮತ್ತು ಅವರ ಕುಟುಂಬದವರಿಗೆ ಮತವನ್ನು ನೀಡಿ ಗೆಲ್ಲಿಸಿದ್ದಾರೆ. ಹಾಗಾಗಿ ಅಮೇಥಿ ಬಗ್ಗೆ ಮಾತನಾಡಿದರೆ ಅವರ ಕುಟುಂಬದವರು ಸಹಿಸುವುದಿಲ್ಲ. ಆದರೂ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಪ್ರಿಯಾಂಕ ಹಾಗೂ ಸೋನಿಯಾ ಗಾಂಧಿ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.