ಬೆಂಗಳೂರು: ರಾಜ್ಯದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಡಿಲಿಗೆ 17 ಕುರಿಗಳು ಬಲಿಯಾಗಿದ್ದು, ಹಾವೇರಿಯಲ್ಲಿ ಎತ್ತು, ಆಕಳು ಸಾವನ್ನಪ್ಪಿವೆ.
- Advertisement 2
ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲೆ ವರುಣ ಅಬ್ಬರಿಸಿದ್ದು, ಶಿರಸಿ, ಮುಂಡಗೋಡ ಭಾಗಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಜನಜೀವನ ತತ್ತರಿಸಿದೆ. ಮುಂಡಗೋಡಿನ ಸಿಂಗನಳ್ಳಿಯಲ್ಲಿ ಸಿಡಿಲು ಬಡಿದು 17 ಕುರಿಗಳು ಸಾವನ್ನಪ್ಪಿದ್ದು, ಕುರಿಗಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿಗಳು ಮಾನು ನಾಗು ಶಳಕೆ ಎಂಬುವವರಿಗೆ ಸೇರಿದ್ದು, ಸಿಂಗನಳ್ಳಿ ಗ್ರಾಮದ ಹೊಲದಲ್ಲಿ ಮೇಯುತಿದ್ದ ವೇಳೆ ಸಿಡಿಲು ಬಡಿದಿದೆ. ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement 3
- Advertisement 4
ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸಿದ್ದರಿಂದ ಮಲಜೋಳ ಬೆಳೆದಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಶುಂಠಿ, ಭತ್ತ ಕೊಯ್ಲು ಮಾಡಿದ್ದ ರೈತರಿಗೆ ಸಂಕಷ್ಟ ಎದುರಾಗಿದೆ. ಹವಾಮಾನ ಇಲಾಖೆ ಮಾರ್ಚ್ 30ರ ವರೆಗೆ ಮಳೆಯ ಮುನ್ನೆಚ್ಚರಿಕೆ ನೀಡಿದೆ.
ಹಾವೇರಿಯಲ್ಲಿ ಸುರಿದ ಮಳೆಯ ಅಬ್ಬರಕ್ಕೆ ಶಿಗ್ಗಾಂವಿ ತಾಲೂಕಿನ ಶಿಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಮತ್ತು ಒಂದು ಆಕಳು ಸಾವನ್ನಪ್ಪಿದೆ. ರೈತ ಶಿವನಗೌಡ ಪಾಟೀಲ್ ಅವರಿಗೆ ಸೇರಿದ ಎತ್ತು ಮತ್ತು ಆಕಳು ಸಾವನ್ನಪ್ಪಿವೆ. ಮರದ ಕೆಳಗೆ ಕಟ್ಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಿಕ್ಕಮಗಳೂರಿನಲ್ಲಿ ಸಹ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಕಳಸ ಸುತ್ತಮುತ್ತ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಯ ನಂತರ ವರುಣನ ಅಬ್ಬರ ಜೋರಾಗಿದ್ದು, ಕಳಸ, ಹೊರನಾಡು, ಹಳ್ಳುವಳ್ಳಿ ಹಿರೇಬೈಲು ಸುತ್ತಮುತ್ತ ಭಾರೀ ಮಳೆಯಾಗಿದೆ. ಬೆಳಗ್ಗೆಯಿಂದಲೂ ಮೋಡಕವಿದ ವಾತವರಣವಿತ್ತು. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಧ್ಯಾಹ್ನದ ವೇಳೆಗೆ ವರುಣದೇವ ತಂಪೆರೆದಿದ್ದಾನೆ. ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.