ಬೆಂಗಳೂರು: ಭಾನುವಾರ ಬಂದ್ರೆ ಬೆಂಗಳೂರಿನ ಮಾಂಸದಂಗಡಿಗಳ ಮುಂದೆ ಜನರ ಸಾಲುಗಳನ್ನು ನೋಡಬಹುದು. ಕೊರೊನಾದ ಆತಂಕವಿದ್ರೂ ಜನ ಮಾತ್ರ ಮುಗಿಬಿದ್ದು ಮಾಂಸದಂಗಡಿಗಳ ಮುಂದೆ ನಿಲ್ಲುತ್ತಾರೆ. ಬೆಂಗಳೂರಿನ ಹೊರವಲಯದ ಕೆಆರ್ ಪುರದ ಬೈರತಿ ಸಮೀಪದ ಕ್ಯಾಲಸನಹಳ್ಳಿಯ ಮಲ್ಲಿಕಾ ಬಿರಿಯಾನಿ ಹೋಟೆಲ್ ನಲ್ಲಿ ಜನರನ್ನು ನೋಡಿದ್ರೆ ಕೊರೊನಾ ಇದೆಯಾ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇತ್ತ ನೆಲಮಂಗಲದ ತಾಲೂಕು ಕಚೇರಿ ಬಳಿ ಉಚಿತವಾಗಿ ಹಂಚುತ್ತಿದ್ದ ಬಿರಿಯಾನಿ ತೆಗೆದುಕೊಳ್ಳಲು ಜನರು ಕೋವಿಡ್ ನಿಯಮಗಳನ್ನು ಮರೆತಿದ್ದರು.
ಕೋವಿಡ್ ನಿಯಮ ಉಲ್ಲಂಘನೆ:
ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ನೀಡಲಾಗಿದೆ. ಆದ್ರೆ ಮಲ್ಲಿಕಾ ಹೋಟೆಲ್ ಮಾಲೀಕರು ಗ್ರಾಹಕರಿಗೆ ಕುಳಿತು ತಿನ್ನಲು ವ್ಯವಸ್ಥೆಯನ್ನ ಮಾಡುವ ಮೂಲಕ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಇನ್ನು ಕೆಲವರು ಬಿರಿಯಾನಿ ಜೊತೆ ಅಲ್ಲಿಯೇ ಮದ್ಯ ಸೇವಿಸಿದ್ದಾರೆ. ಪೊಲೀಸರು ಮಾತ್ರ ಕಂಡು ಕಾಣದಂತೆ ಕುಳಿತಿರೋದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಿರಿಯಾನಿ ಫುಡ್ ಕಿಟ್:
ನೆಲಮಂಗಲ ತಾಲೂಕು ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರಿಂದ ಬಿರಿಯಾನಿ ಹಾಗೂ ಫುಡ್ ಕಿಟ್ ವಿತರಣೆ ಮಾಡಲಾಗಿದೆ. ಜನರು ಮಾತ್ರ ಕೊರೊನಾ ನಿಯಮಗಳನ್ನ ಪಾಲಿಸದೇ ಕಿಟ್ ಪಡೆದುಕೊಂಡಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಪಟ್ಟರು. ನೆಲಮಂಗಲ ಕಾಂಗ್ರೆಸ್ ಮುಖಂಡ ವೆಂಕಟೇಶ್ ಬಾಬು ಪೌರ ಕಾರ್ಮಿಕರು, ಆಟೋ ಚಾಲಕರು ಹಾಗೂ ಬಡ ಜನರಿಗೆ ಫುಡ್ ಕಿಟ್ ವಿತರಿಸಿದರು.