-ಸಿಸಿಟಿವಿಯಲ್ಲಿ ದೃಶ್ಯ ಸರೆ
ಬೆಂಗಳೂರು: ಎರಡು ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮರ್ಮಾಂಗಕ್ಕೆ ಒದ್ದು ಯುವಕನನ್ನು ಕೊಂದಿರುವ ಸಿಸಿಟಿವಿ ದೃಶ್ಯ ನೆಲಮಂಗಲ ಟೌನ್ ಪೊಲೀಸರಿಗೆ ಲಭ್ಯವಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲದ ಜಯನಗರದಲ್ಲಿ ಎರಡು ದಿನದ ಹಿಂದೆ ನಡೆದ ಗಲಾಟೆಯಲ್ಲಿ ಯುವಕನ ಕೊಲೆ ನಡೆದಿತ್ತು. ಈ ಗಲಾಟೆಯಲ್ಲಿ 26 ವರ್ಷದ ಅರುಣ್ ಎಂಬ ಯುವಕ ಮೃತನಾಗಿದ್ದನು. ಗಲಾಟೆ ನಡೆದ ದೃಶ್ಯಗಳು ಸ್ಥಳೀಯ ಬೇಕರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತಿನ ಚಕಮಕಿಯಿಂದ ಶುರುವಾದ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಮೂವರು ಆರೋಪಿಗಳ ಗುಂಪು ಅರುಣ್ ಮರ್ಮಾಂಗಕ್ಕೆ ಕಾಲಿನಲ್ಲಿ ಒದ್ದು ಕೊಲೆಗೈದು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಟೌನ್ ಪೊಲೀಸರು ಪಿಎಸ್ಐ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳಾದ ಬೆಂಗಳೂರು ನಗರದ ಇಮ್ರಾನ್, ಸಲ್ಮಾನ್ ಹಾಗೂ ಸುಜೈನ್ ನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.