ತುಮಕೂರು: ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ಡೌನ್ ಘೋಷಿಸಿತ್ತು. ಇಷ್ಟಾದರೂ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಜನರೇ ಖುದ್ದು ಸ್ವಯಂ ಪ್ರೇರಣೆಯಿಂದ ಲಾಕ್ಡೌನ್ ಜಾರಿಗೆ ತರುತ್ತಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಜನರೇ ಜನತಾ ಲಾಕ್ಡೌನ್ ಮಾಡಿದ್ದಾರೆ.
ಕಲ್ಪತರು ನಾಡು ತುಮಕೂರಲ್ಲಿ ಕೊರೊನಾ 60ರ ಗಡಿ ತಲುಪಿದೆ. ಮಧುಗಿರಿ ಪಟ್ಟಣದಲ್ಲಿ ಈವರೆಗೂ ಐದು ಕೊರೊನಾ ಕೇಸ್ಗಳು ಪತ್ತೆಯಾಗಿವೆ. ಸೋಂಕು ಮತ್ತಷ್ಟು ಹರಡುವ ಆತಂಕದಲ್ಲಿರುವ ಮಧುಗಿರಿ ಜನ ತಮ್ಮ ರಕ್ಷಣೆಗೆ ತಾವೇ ಸ್ವಯಂ ಲಾಕ್ಡೌನ್ ಮಾಡಿದ್ದಾರೆ.
ಮಧುಗಿರಿ ಪಟ್ಟಣದಲ್ಲಿ ಬೆಳಗ್ಗೆಯಿಂದಲ್ಲೇ ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿ ಲಾಕ್ ಡೌನ್ಗೆ ವರ್ತಕರು ಬೆಂಬಲ ಸೂಚಿಸಿದ್ದಾರೆ. ಮೂರು ದಿನಗಳ ಕಾಲ ಮಧುಗಿರಿ ಪಟ್ಟಣದಲ್ಲಿ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ. ಅಂದರೆ ಜೂನ್ 29ರವರೆಗೆ ಸಂಪೂರ್ಣ ಬಂದ್ ಆಗಿರಲಿದೆ. ಮಧುಗಿರಿ ಪಟ್ಟಣದ ವರ್ತಕರ ಸಂಘ, ಕನ್ನಡ ಪರ ಸಂಘಟನೆ, ಮಧುಗಿರಿ ನಾಗರೀಕರ ಸಂಘ ಲಾಕ್ಡೌನ್ಗೆ ಬೆಂಬಲಿಸಿವೆ. ಎಲ್ಲಾ ವ್ಯಾಪಾರ ವಹಿವಾಟು, ವಾಹನ ಸಂಚಾರ ಬಂದ್ ಆಗಲಿದೆ.
ಸರ್ಕಾರ ಏನೋ ಅನ್ಲಾಕ್ ಮಾಡಿ ಕೈ ತೊಳೆದುಕೊಂಡಿದೆ. ಆದರೆ ಜಿಲ್ಲೆಯಲ್ಲಿ ಸೋಂಕು ಅತಿರೇಕಕ್ಕೆ ಏರುವ ಎಲ್ಲ ಲಕ್ಷಣಗಳು ಕಾಣ್ತಿವೆ. ಅದರಲ್ಲೂ ಮಧುಗಿರಿಯಲ್ಲಿ ಎಚ್ಚೆತ್ತ ಜನ ತಮ್ಮ ರಕ್ಷಣೆಗೆ ತಾವೇ ಲಾಕ್ಡೌನ್ ವಿಧಿಸಿಕೊಂಡಿದ್ದಾರೆ. ನಿನ್ನೆಯಿಂದಲೇ ಸೆಲ್ಫ್ ಲಾಕ್ಡೌನ್ ಫಾಲೋ ಮಾಡ್ತಿರೋ ಮಧುಗಿರಿ ಜನ ರಸ್ತೆಗಿಳಿಯದೇ ಮನೆಯಲ್ಲೇ ಇದ್ದು ಕೊರೋನಾ ವಿರುದ್ಧ ಸಮರ ಸಾರಿದ್ದಾರೆ. ಪರಿಣಾಮ ಮಧುಗಿರಿ ಪಟ್ಟಣದಲ್ಲಿ ವಾಹನ ಸಂಚಾರ ಜನ ಸಂಚಾರ ಇಲ್ಲದೆ ಸ್ತಬ್ಧವಾಗಿದೆ.
ಒಟ್ಟಿನಲ್ಲಿ ಕೊರೊನಾದಿಂದ ರಕ್ಷಸಿಕೊಳ್ಳಲು ಮಧುಗಿರಿ ಜನ ತಮಗೆ ತಾವೇ ಲಾಕ್ಡೌನ್ ವಿಧಿಸಿಕೊಂಡಿದ್ದಾರೆ.