ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ರಣ ಗಾಳಿ ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲ. ಪ್ರಾಣಿ-ಪಕ್ಷಿಗಳಿಗೂ ತೀವ್ರ ಸಂಕಷ್ಟ ತಂದೊಡ್ಡಿದೆ. ವಾನ ಸಂತತಿಯಂತೂ ಆಹಾರವಿಲ್ಲದೆ ಪರದಾಡುವಂತಾಗಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನೂರಾರು ವರ್ಷಗಳಿಂದ ಬದುಕುತ್ತಿರು ವಾನರ ಸಂತಿತಿ ಇದೀಗ ಅನ್ನ-ಆಹಾರ ಇಲ್ಲದೆ ಪರದಾಡುತ್ತಿದೆ. ಭಾರೀ ಮಳೆಯಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ತೀರಾ ಕಡಿಮೆ ಇದೆ. ಇದರಿಂದಾಗಿ ಕೋತಿಗಳಿಗೆ ಆಹಾರ ಹಾಕುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದರಿಂದ ಮಂಗಗಳು ಯಾರಾದರೂ ವಾಹನ ನಿಲ್ಲಸಿದ ಕೂಡಲೇ ಏನಾದ್ರು ಕೊಡುತ್ತಾರೆಂದು ವಾಹನದಿಂದ ಇಳಿದವರ ಕೈಯನ್ನೇ ನೋಡುವ ದೃಶ್ಯ ಮನಕಲಕುವಂತಿದೆ.
ಚಾರ್ಮಾಡಿಯಲ್ಲಿ ಭಾರೀ ಗಾಳಿ-ಮಳೆ ಸುರಿಯುತ್ತಿದ್ದು, ವಾನರ ಸಂತತಿ ಮಳೆಯಲ್ಲಿ ನೆನೆದು ಚಳಿಯಲ್ಲಿ ನಡುಗುತ್ತಿದೆ. ಪುಟ್ಟ ಮಂಗಗಳು ಮರದಿಂದ ಮರಕ್ಕೆ ಹಾರಿ ಆಹಾರ ಹುಡುಕುವ ಪರಿ ಕೂಡ ಬೇಸರ ಮೂಡಿಸುವಂತಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಪ್ರವಾಸಿಗರ ಸಂಖ್ಯೆ ಸಹ ಕಡಿಮೆಯಾಗಿದೆ. ಹೀಗಾಗಿ ಮಂಗಗಳಿಗೆ ಆಹಾರ ಹಾಕುವವರೇ ಇಲ್ಲದಂತಾಗಿದ್ದು, ಮರದಿಂದ ಮರಕ್ಕೆ ಜಿಗಿದು ಆಹಾರವನ್ನು ಹುಡುಕುತ್ತಿವೆ. ಸಿಕ್ಕ ಹಣ್ಣುಗಳನ್ನೇ ತಿಂದು ಜೀವಿಸುತ್ತಿವೆ.
ಮಲೆನಾಡು ಭಾಗದಲ್ಲಿ ಭಾರೀ ಗಾಳಿಯಿಂದಾಗಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದೆ. ತಾಲೂಕಿನ ಜಾವಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೂಡಿಗೆರೆಯಿಂದ ಕಳಸ- ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಮಲೆನಾಡಲ್ಲಿ ಮಳೆ ಪ್ರಮಾಣ ತಗ್ಗಿದೆ. ಆದರೆ ವಿಪರೀತ ಗಾಳಿ ಬೀಸುತ್ತಿದೆ. ಇದರಿಂದ ಸಮುದ್ರದಲ್ಲಿ ಸಹ ಕಡಲ್ಕೊರೆತ ಉಂಟಾಗಿದೆ.