ಚಿಕ್ಕಬಳ್ಳಾಪುರ: ಸ್ನೇಹಿತನಿಗೆ ಚಾಕುವಿನಿಂದ ಮನಸ್ಸೋಇಚ್ಛೆ ಇರಿದಿದ್ದ ಇಬ್ಬರು ಯುವಕರನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಸಯ್ಯದ್ ಅಹ್ಮದ್ ಸ್ನೇಹಿತರಿಂದ ಹಲ್ಲೆಗೊಳಗಾದ ಯುವಕ. ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಹಿಂಭಾಗದಲ್ಲಿ ಮದ್ಯದ ಅಮಲಿನಲ್ಲಿದ್ದ ಸಯ್ಯದ್ ಅಹ್ಮದ್ನಿಗೆ ಆತನ ಸ್ನೇಹಿತರಾದ ರಾಮು, ಪ್ರವೀಣ್ ಮತ್ತು ವೇಣು ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿಗಳಾದ ರಾಮು ಮತ್ತು ಪ್ರವೀಣ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ವೇಣು ನಾಪತ್ತೆಯಾಗಿದ್ದಾನೆ. ಐದು ದಿನಗಳ ಹಿಂದೆ ಆರೋಪಿ ರಾಮು ಮನೆ ಬಳಿ ನಿಲ್ಲಿಸಿದ್ದ ಬೈಕಿಗೆ ಅಪರಿಚಿತರು ಬೆಂಕಿ ಹಚ್ಚಿದ್ದರು. ಇದರಿಂದ ರಾಮು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಅಲ್ಲದೇ ಬೈಕ್ ಪಕ್ಕದಲ್ಲೇ ಇದ್ದ ಬೇರೊಬ್ಬರ ಕಾರಿಗೂ ಬೆಂಕಿ ತಗುಲಿತ್ತು.
ಈ ಸಂಬಂಧ ಆಕ್ರೋಶಗೊಂಡಿದ್ದ ರಾಮು ತನ್ನ ಸ್ನೇಹಿತರ ಜೊತೆಗೂಡಿ ಬೆಂಕಿ ಹಚ್ಚಿದ್ದವರು ಯಾರು ಅಂತ ಪತ್ತೆ ಮಾಡೋಣ ಬಾ ಎಂದು ಕುಡಿದ ಅಮಲಿನಲ್ಲಿದ್ದ ಅಹ್ಮದ್ನನ್ನು ಕರೆದಿದ್ದಾನೆ. ಆದರೆ ಆಹ್ಮದ್ ಬರಲು ನಿರಾಕರಿಸಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಚಾಕುವಿನಿಂದ ಇರಿದಿದ್ದಾರೆ. ಅಹ್ಮದ್ ಮುಖ, ತಲೆ, ಕೈ ಕಾಲಿನ ಭಾಗದಲ್ಲಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.