ಬೆಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಬಿ.ಜಿ.ಎಸ್. ಕ್ರಿಕೆಟ್ ಕ್ರೀಡಾಂಗಣ ಮತ್ತು ಬಿ.ಜಿ.ಎಸ್ ಅಂತರರಾಷ್ಟ್ರೀಯ ಅಕಾಡೆಮಿಯ ಶಾಲಾ ಕಟ್ಟಡವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್, ನಟ ಸುದೀಪ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ದೂರದಲ್ಲಿ ಅಲ್ಲಿ ಕುಳಿತಾಗ ಕಾರ್ಯಕ್ರಮ ನೋಡುತ್ತಾ ಒಂದು ಕ್ಷಣ ನಾವೆಲ್ಲ ಮಕ್ಕಳಾಗಿದ್ದೀವಿ. ಇಂತಹ ಗಣ್ಯರ ಜೊತೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿದ ಕಾರ್ಯಕ್ರಮ ಆಯೋಜಕರಿಗೆ ಧನ್ಯವಾದಗಳು. ಅದ್ಭುತವಾದ ಮೈದಾನ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ಆಟಗಳು ಇಲ್ಲಿ ನಡೆಯಲಿ. ಮುಂದೊಂದು ದಿನ ನಾನು ಲೆಜೆಂಡ್ ಗೆಳೆಯ ರಾಹುಲ್ ದ್ರಾವಿಡ್ ಜೊತೆ ಇಲ್ಲಿ ಆಡುತ್ತೇನೆ ಎಂದು ಸುದೀಪ್ ಹೇಳಿದರು.
ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರೋ ಬಿಜಿಎಸ್ ಸಂಸ್ಥೆ ಈಗ ವಿದ್ಯಾರ್ಥಿಗಳಲ್ಲಿ ಕ್ರೀಡಾಮನೋಭಾವ ಬೆಳೆಸುವ ಚಿತ್ತ ಹರಿಸಿದೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳನ್ನ ನೀಡಲು ಅತ್ಯುತ್ತಮ ಸುಸಜ್ಜಿತ ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣವನ್ನ ನಿರ್ಮಿಸಿದೆ. ಕ್ರೀಡಾಂಗಣವನ್ನ ಸ್ಟೀಲ್ ಸ್ಟ್ರಕ್ಟರ್ ನಲ್ಲಿ ನಿರ್ಮಿಸಿದ್ದು 80 ಯಾರ್ಡ್ ವಿಸ್ತೀರ್ಣವುಳ್ಳದ್ದಾಗಿದೆ. ರಾಷ್ಟ್ರ, ರಾಜ್ಯ ಮಟ್ಟದ ಪಂದ್ಯಗಳನ್ನ ಆಯೋಜಿಸಬಹುದಾಗಿದೆ.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದಸ್ವಾಮಿ,ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ, ಉಪಮುಖ್ಯಮಂತ್ರಿ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಖ್ಯಾತ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್, ಖ್ಯಾತ ನಟ ಸುದೀಪ್ ಮೊದಲಾದವರು ಉಪಸ್ಥಿತರಿದ್ದರು.