ಕಲಬುರಗಿ: ಮುಷ್ಕರನಿರತ ಸಾರಿಗೆ ಸಿಬ್ಬಂದಿ ಕೆಎಸ್ಆರ್ ಟಿಸಿ ಬಸ್ ಮೇಲೆ ಕಲ್ಲು ತುರಾಟ ನಡೆಸಿದ್ದು, ಚಾಲಕನ ಬೆರಳಿಗೆ ಗಂಭೀರ ಗಾಯವಾಗಿದೆ. ಕಲ್ಲು ತೂರಾಟ ನಡೆಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ದರ್ಗಾ ಬಳಿ ಘಟನೆ ನಡೆದಿದ್ದು, ಮುಷ್ಕರದ ಮಧ್ಯೆ ಕರ್ತವ್ಯಕ್ಕೆ ಹಾಜರಾಗಿ ಚಾಲಕ ರವಿ ಬಸ್ ಓಡಿಸುತ್ತಿದ್ದ. ಸಾರಿಗೆ ಸಂಸ್ಥೆ ಬಸ್ ಕಲಬುರಗಿಯಿಂದ ಯಾದಗಿರಿಗೆ ಹೊರಟಿತ್ತು. ಈ ವೇಳೆ ಉದ್ರಿಕ್ತ ಮೂವರು ಎನ್ಈಕೆಆರ್ ಟಿಸಿ ಚಾಲಕರಿಂದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮೂವರು ಚಾಲಕರನ್ನು ಬಂಧಿಸಲಾಗಿದೆ.
ಸೇಡಂ ಡಿಪೋದ ವಿಶ್ವನಾಥ್ ಚೌವ್ಹಾಣ್, ಚಿತ್ತಾಪುರ ಡಿಪೋದ ಬಸವರಾಜ್ ಜಾಧವ್ ಮತ್ತು ಅಶೋಕ್ ಮೇಲಕೇರಿ ಬಂಧನಕ್ಕೊಳಗಾದವರು. ಚಾಲಕ ರವಿ ಬೆರಳಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.