ಶಿವಮೊಗ್ಗ: ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋದ ವ್ಯಕ್ತಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನಿಂಗಪ್ಪ ಪುಟ್ಟಪ್ಪ (58) ಎಂದು ಗುರುತಿಸಲಾಗಿದೆ. ಮೃತ ನಿಂಗಪ್ಪ ಮನೆಯ ಅಂಗಳಕ್ಕೆ ಮತ್ತು ಮನೆಯೊಳಗೆ ಪ್ರತಿನಿತ್ಯ ಹುಚ್ಚು ನಾಯಿ ಬರುತ್ತಿತ್ತಂತೆ. ಇದರಿಂದ ನಿಂಗಪ್ಪ ಕೋಪಗೊಂಡು ನಾಯಿಗೆ ಏನಾದರೂ ಮಾಡಬೇಕು ಎಂದು ಯೋಚಿಸಿದ್ದ.
ನಿಂಗಪ್ಪ ಹುಚ್ಚು ನಾಯಿ ಸಾಯಲಿ ಎಂದು ಮನೆಯ ಗೇಟ್ಗೆ ವಿದ್ಯುತ್ ತಂತಿ ಅಳವಡಿಸಿದ್ದನು. ಆದರೆ ಶನಿವಾರ ಮಧ್ಯ ರಾತ್ರಿ ನಿಂಗಪ್ಪ ಮೂತ್ರ ವಿಸರ್ಜನೆ ಮಾಡಲು ಎಂದು ಮನೆಯಿಂದ ಹೊರಗೆ ಬಂದಿದ್ದಾನೆ. ನಂತರ ತಾನೇ ಕಟ್ಟಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾನೆ.
ಈ ಘಟನೆ ಕುರಿತು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.