– ಶ್ರೀಕ್ಷೇತ್ರಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ
ಮಂಗಳೂರು/ಶಿವಮೊಗ್ಗ: ಇಂದಿನಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಪ್ರಸಿದ್ಧ ದೇವಾಲಯ ಧರ್ಮಸ್ಥಳ ಹಾಗೂ ಶಿವಮೊಗ್ಗದ ಸಿಗಂಧೂರು ಚೌಡೇಶ್ವರಿ ದೇವಾಲಯ ಇಂದಿನಿಂದ ಭಕ್ತರಿಗೆ ಮುಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರೋ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಈಗಾಗಲೇ ಭಕ್ತ ಸಾಗರ ಹರಿದು ಬರುತ್ತಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧ ಕಡೆಯಿಂದ ಆಗಮಿಸುತ್ತಿರುವ ಭಕ್ತರು, ನೇತ್ರಾವತಿಯಲ್ಲಿ ಮಿಂದು ದರ್ಶನ ಪಡೆಯುತ್ತಿದ್ದಾರೆ. ಕೋವಿಡ್ ನಿಯಮದೊಂದಿಗೆ ಶ್ರೀಕ್ಷೇತ್ರ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಿದೆ. ಇದನ್ನೂ ಓದಿ: ಎರಡೂವರೆ ತಿಂಗಳ ಬಳಿಕ ಅನ್ಲಾಕ್ – ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ಗಳು ಓಪನ್
ಇತ್ತ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶ್ರೀಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಾಲಯ ಇಂದಿನಿಂದ ಓಪನ್ ಆಗಿದೆ. ಶ್ರೀಕ್ಷೇತ್ರ ಸಿಗಂಧೂರಿನಲ್ಲಿ ಭಕ್ತರಿಗೆ ದೇವಿಯ ದರ್ಶನ ಭಾಗ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಅನ್ ಲಾಕ್ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗಿದೆ.
ತುಮರಿ ಗ್ರಾ. ಪಂ. ಮತ್ತು ದೇವಾಲಯದ ಟ್ರಸ್ಟ್ ತೀರ್ಮಾನಿಸಿ ಭಕ್ತರಿಗೆ ಇಂದಿನಿಂದ ದರ್ಶನ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಿತ್ಯ ಪೂಜೆ ಹೊರತುಪಡಿಸಿ, ವಿಶೇಷ ಪೂಜೆ ಪುನಸ್ಕಾರಕ್ಕೆ ಅವಕಾಶ ಇಲ್ಲ.