ಬೆಂಗಳೂರು: ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕ್ ಕಳ್ಳತನ ಆಗಿರುವ ವಿಚಾರ ತಿಳಿದು ಮಹಿಳೆಯೊಬ್ಬರು ಸ್ಥಳದಲ್ಲೇ ಸಣ್ಣ ಪ್ರಮಾಣದಲ್ಲಿ ಹೃದಯಾಘಾತವಾಗಿ ಕುಸಿದು ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕತ್ರಿಗುಪ್ಪೆ ಕಾವೇರಿ ನಗರದ ನಿವಾಸಿಯಾಗಿರುವ ಮಮತಾ, ಜುಲೈ 13 ರಂದು ಚಾಮರಾಜಪೇಟೆ ಠಾಣಾ ವ್ಯಾಪ್ತಿಯ ಗೌರಿ ಶಂಕರ ದೇವಸ್ಥಾನಕ್ಕೆ ಪೂಜೆಗೆ ಹೋಗಿದ್ದರು. ಈ ವೇಳೆ ದೇವಸ್ಥಾನದ ಹೊರಗೆ ಬೈಕ್ ನಿಲ್ಲಿಸಿ ತೆರಳಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿತ್ತು.
ದೇವಸ್ಥಾನದ ಬಳಿ ನಿಲ್ಲಿಸಿದ್ದ ಬೈಕನ್ನು ಅದೇ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಕದ್ದು ಎಸ್ಕೇಪ್ ಆಗಿದ್ದ. ಬೈಕ್ ಖದೀಯುವ ಮುನ್ನ ಮಹಿಳೆ ಬಳಿ ಇದ್ದ ಬೈಕ್ ಕೀಯನ್ನು ವೃದ್ಧ ಎಗರಿಸಿದ್ದ. ದೇವಸ್ಥಾನದಿಂದ ಹೊರ ಬಂದ ಮಹಿಳೆಗೆ ಬೈಕ್ ಕಳ್ಳತನ ಆಗಿರುವುದು ತಿಳಿದಿತ್ತು. ಬೈಕ್ ಮೇಲೆ ತುಂಬಾ ಸೆಂಟಿಮೆಂಟ್ ಹೊಂದಿದ್ದ ಅವರು ಪ್ರಜ್ಞೆ ತಪ್ಪಿ, ಹೃದಯಾಘಾತವಾಗಿ ಕೆಳಗೆ ಬಿದ್ದಿದ್ದರು.
ಬೈಕ್ ಕಳುವಿನ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕನ್ನು ವೃದ್ಧ ಕಳ್ಳತನ ಮಾಡಿರುವ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ಬೈಕ್ ಕದ್ದ ವೃದ್ಧನ ಪತ್ತೆ ಕಾರ್ಯ ಮಾಡುತ್ತಿದ್ದಾರೆ.