– ಠಾಣೆಯೊಳಗೆ ಅಪ್ಪ-ಮಗನನ್ನು ಸಾಯೊವರೆಗೂ ಹಿಂಸಿಸಿದ್ರು
ಚೆನ್ನೈ: ತಮಿಳುನಾಡಿನಲ್ಲಿ ಠಾಣೆಯೊಳಗೆ ಅಪ್ಪ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಅವರನ್ನು ಹಿಂಸಿಸಿ ಸಾಯುವಂತೆ ಮಾಡಿದ ಪೊಲೀಸರ ವಿರುದ್ಧ ಇನ್ನೂ ಎಫ್ಐಆರ್ ದಾಖಲಾಗದೆ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬಹಳ ಆಕ್ರೋಶ ವ್ಯಕ್ತವಾಗಿದೆ.
ಕೇವಲ ಲಾಕ್ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಜಯರಾಜ್ (59) ಮತ್ತು ಅವರ ಪುತ್ರ ಜೆ ಬೆನಿಕ್ಸ್ (31) ಅವರನ್ನು ಠಾಣೆಗೆ ಕರೆದುಕೊಂಡು ಬಂದ ತಮಿಳುನಾಡಿನ ಸಾಥಕುಲಂ ಪೊಲೀಸರು, ಅವರನ್ನು ಲಾಕ್ಪ್ಗೆ ಹಾಕಿ ಹಲ್ಲೆ ಮಾಡಿದ್ದರಿಂದಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಜೂನ್ 22ರಂದು ಮೊಬೈಲ್ ಅಂಗಡಿಯನ್ನು ನೀಡಿರುವ ಅವಧಿಗೂ ಹೆಚ್ಚು ಕಾಲ ತೆರೆದಿದ್ದಾರೆ ಎಂದು, ಜಯರಾಜ್ ಮತ್ತು ಜೆ ಬೆನಿಕ್ಸ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಈ ವೇಳೆ ಅವರನ್ನು ಕೋರ್ಟಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಮ್ಯಾಜಿಸ್ಟ್ರೇಟ್ ಬಿ ಸರವಣ ಅವರನ್ನು ವಿಚಾರಣೆ ಮಾಡುವಂತೆ ಅದೇಶ ಮಾಡಿದ್ದರು. ಈ ವೇಳೆ ಅವರನ್ನು ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಅಪ್ಪ-ಮಗನ ಮೇಲೆ ಹಲ್ಲೆ ಮಾಡಿದ್ದರು.
ಪೊಲೀಸರ ಏಟನ್ನು ತಡೆಯಲಾಗದ ಬೆನಿಕ್ಸ್ ಅಲ್ಲೇ ಕುಸಿದು ಬಿದ್ದಿದ್ದ, ಆತನನ್ನು ಜೂನ್ 22ರ ಸಂಜೆ ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಂದೇ ರಾತ್ರಿ ಆತ ಮೃತಪಟ್ಟಿದ್ದ. ಇದಾದ ನಂತರ ಅವರ ತಂದೆ ಜಯರಾಜ್ ಕೂಡ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಜೂನ್ 23ರ ಬೆಳಗ್ಗೆ ಅದೇ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಅವರು ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ವಿಚಾರ ಹೊರಗೆ ಬರುತ್ತಿದ್ದಂತೆ ದೇಶದಲ್ಲೆಡೆ ಪೊಲೀಸರ ಕ್ರೂರ ಕೆಲಸದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಆಗ ಇದನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಪೊಲೀಸ್ ಇಲಾಖೆ ಅವರೇ ಬೇಕೆಂದೆ ಪೊಲೀಸ್ ಠಾಣೆಯಲ್ಲಿ ಬಿದ್ದು ಗಾಯಮಾಡಿಕೊಂಡರು. ಇದರಲ್ಲಿ ನಮ್ಮದು ಏನೂ ತಪ್ಪಿಲ್ಲ ಎಂದು ಹೇಳಿತ್ತು. ಜೊತೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಆದರೆ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಬೇಕು ಎಂದು ಜನರ ಆಗ್ರಹಿಸಿದ್ದರು.
ಈಗ ಬೆನಿಕ್ಸ್ ಮತ್ತು ಜಯರಾಜ್ ಅವರ ಮರಣೋತ್ತರ ವರದಿ ಬಂದಿದ್ದು, ಅವರನ್ನು ಹಿಂಸಿಸಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಆದರೆ ಇನ್ನೂ ಪೊಲೀಸ್ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗದೆ ಇರುವುದು ವಿಪರ್ಯಾಸ. ಇದರೆಲ್ಲದ ನಡುವೆ ಮೃತ ಕುಟುಂಬ ನಮಗೆ ನ್ಯಾಯ ಸಿಗುವವರೆಗೂ ನಾವು ಮೃತದೇಹಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ಹೇಳಿದೆ. ನಮಗೆ ನ್ಯಾಯ ಕೊಡಿಸುವುದಾಗಿ ನ್ಯಾಯಾಧೀಶರು ಮಾತು ಕೊಟ್ಟರೇ ಮೃತದೇಹವನ್ನು ಪಡೆಯುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಡಿಎಂಕೆ ಪಕ್ಷದ ಸಂಸದ ಕನಿಮೋಜಿ ಅವರು ಈ ವಿಚಾರವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್.ಎಚ್.ಆರ್.ಸಿ) ಪತ್ರ ಬರೆದಿದ್ದು ಇದರಲ್ಲಿ, ಪೊಲೀಸ್ ಅಧಿಕಾರಿಗಳು ಬೆನ್ನಿಕ್ಸ್ ಅವರ ಗುದದ್ವಾರಕ್ಕೆ ಲಾಠಿ ಹಾಕಿದ್ದಾರೆ. ಈ ವೇಳೆ ರಕ್ತಸ್ರಾವ ಉಂಟಾಗಿ ಅವರು ಸಾವನ್ನಪ್ಪಿದ್ದಾರೆ ಮತ್ತು ಪೊಲೀಸ್ ಅಧಿಕಾರಿಗಳು ಜಯರಾಜ್ ಅವರನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ. ಪೊಲೀಸರು ಶೂಳಿಂದ ಜಯರಾಜ್ ಅವರ ಎದೆಗೆ ಮೇಲೆ ಅನೇಕ ಬಾರಿ ಒದ್ದಿರುವ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.