ಚೆನ್ನೈ: ಹಿರಿಯ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅಪ್ಪ ಸಂಗೀತ ಕೇಳುತ್ತಿದ್ದಾರೆ. ಜೊತೆಗೆ ತಾಳಕ್ಕೆ ತಕ್ಕಂತೆ ಕೈಯಾಡಿಸುತ್ತಿದ್ದಾರೆ ಎಂದು ಅವರ ಪುತ್ರ ಚರಣ್ ಅವರು ಮಾಹಿತಿ ನೀಡಿದ್ದಾರೆ.
ಅಗಸ್ಟ್ 5ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಸ್ಪಿಬಿಯವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಸ್ವಲ್ಪ ಗಂಭೀರವಾಗಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಎಸ್ಪಿಬಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇಂದು ಅವರು ನಿನ್ನೆಗಿಂತ ಹೆಚ್ಚು ಗುಣಮುಖರಾಗಿದ್ದಾರೆ ಎಂದು ಅವರ ಪುತ್ರ ಚರಣ್ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಮಾಡಿದ್ದಾರೆ.
https://www.instagram.com/p/CEWl_Qjhbsa/
ಈ ವಿಚಾರವಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಚರಣ್, ತಂದೆಯ ಆರೋಗ್ಯ ನಿನ್ನೆಗಿಂತ ಇಂದು ಹೆಚ್ಚು ಸುಧಾರಣೆಗೊಂಡಿದೆ. ಅವರ ಶ್ವಾಸಕೋಶಗಳು ಉತ್ತಮ ಸ್ಥಿತಿಗೆ ಮರುಳುತ್ತಿವೆ ಎಂದು ಎಂಜಿಎಂ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಜೊತೆಗೆ ತಂದೆ ಆರೋಗ್ಯವಾಗಿದ್ದು, ನನಗೆ ಏನ್ನನ್ನೋ ಬರೆದು ಹೇಳಲು ಬಂದರು. ಆದರೆ ಅವರ ಕೈಯಲ್ಲಿ ಪೆನ್ ಹಿಡಿದುಕೊಳ್ಳಲು ಆಗಲಿಲ್ಲ. ಇನ್ನೂ ಒಂದು ವಾರದಲ್ಲಿ ತಂದೆ ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.
ಅಪ್ಪ ಇನ್ನೂ ವೆಂಟಿಲೇಟರ್ ನಲ್ಲೇ ಇದ್ದಾರೆ. ಆದರೆ ಅವರ ಆರೋಗ್ಯದಲ್ಲಿ ಬಹಳ ಚೇತರಿಕೆ ಕಂಡಿದೆ. ಅವರು ಸಂಗೀತವನ್ನು ಕೇಳುತ್ತಿದ್ದಾರೆ. ತಾಳಕ್ಕೆ ತಕ್ಕಂತೆ ಕೈಯಾಡಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಗಿಂತ ಅಪ್ಪ ಇಂದು ಬಹಳ ಚೇತರಿಸಿಕೊಂಡಿದ್ದಾರೆ. ಅಪ್ಪನ ಆರೋಗ್ಯಕ್ಕಾಗಿ, ಅವರು ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಚರಣ್ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.
ಕಳೆದ ಆಗಸ್ಟ್ 5ರಂದು ಎಸ್ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್ಬಿಪಿಗೆ ಚಿಕಿತ್ಸೆ ನೀಡಿದ್ದವು. ಕೊರೊನಾ ಸೋಂಕು ತಗಲಿ ಅವರ ಶ್ವಾಸಕೋಶಗಳಿಗೆ ಹಾನಿಯಾಗಿತ್ತು.