ಬೆಂಗಳೂರು: ಕೊರೋನಾ ಆತಂಕದ ಮಧ್ಯೆಯೇ ಡಿಸೆಂಬರ್ 2ನೇ ವಾರದಿಂದ ಹಂತ ಹಂತವಾಗಿ ಶಾಲೆ, ಕಾಲೇಜು ತೆರೆಯಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಸರಣಿ ಸಭೆಗಳನ್ನು ನಡೆಸುತ್ತಿದೆ.
ಕಳೆದ ಎರಡು ದಿನಗಳಿಂದ ರಾಜ್ಯದ ಎಲ್ಲಾ ಬಿಇಓಗಳಿಂದ ಗ್ರೌಂಡ್ ರಿಪೋರ್ಟ್ ಸಂಗ್ರಹಿಸುತ್ತಿರುವ ಶಿಕ್ಷಣ ಇಲಾಖೆ ಇಂದು ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ಸಭೆ ನಡೆಸಿತು. ಕ್ಯಾಮ್ಸ್, ಕುಸ್ಮಾ, ಸಿಬಿಎಸ್ಇ, ಐಸಿಎಸ್ಇ ಬೋರ್ಡ್ ಅಧಿಕಾರಿಗಳಿಂದ ಶಾಲೆ ಆರಂಭಿಸುವ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅಭಿಪ್ರಾಯ ಸಂಗ್ರಹಿಸಿದರು.
ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಶಾಲೆ ಶುರುವಾದ ಮೇಲೆ ಸೋಂಕು ಸ್ಫೋಟಗೊಂಡಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಶಿಕ್ಷಣ ಇಲಾಖೆ ನೀಡಿದೆ. ಇದೇ ವೇಳೆ ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ ಒಂದಿಷ್ಟು ಸಲಹೆಗಳನ್ನು ನೀಡಿದೆ.
ಈ ಮಧ್ಯೆ, ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಶಾಲಾ-ಕಾಲೇಜು ಪ್ರಾರಂಭ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಆತುರದ ನಿರ್ಧಾರ ಕೈಗೊಂಡ್ರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಮುದಾಯದ ಮಾರಣಹೋಮಕ್ಕೆ ನಾಂದಿ ಹಾಡಿದಂತಾಗುತ್ತದೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.
ಖಾಸಗಿ ಶಾಲೆ ಒಕ್ಕೂಟದ ಸಲಹೆ ಏನು?
* ಎ,ಬಿ,ಸಿ.. ಹೀಗೆ ಮೂರು ಹಂತಗಳಲ್ಲಿ ಶಾಲೆ ಓಪನ್ ಮಾಡಬೇಕು
* ಮೊದಲ ಹಂತದಲ್ಲಿ 9ರಿಂದ ಪಿಯುಸಿವರೆಗೆ ಕ್ಲಾಸ್ ನಡೆಸಿ
* ಸಾಧಕ-ಬಾಧಕಗಳನ್ನು ಪರಿಶೀಲಿಸಿ ಪ್ರೈಮರಿ, ಮಿಡ್ಲ್ ಸ್ಕೂಲ್ ತೆರೆಯಿರಿ
* ಶೈಕ್ಷಣಿಕ ವರ್ಷದ ಅವಧಿಯನ್ನು ಬದಲಾಯಿಸಿ
* ಡಿಸೆಂಬರ್ನಿಂದ ನವೆಂಬರ್ ವರೆಗೂ ಶೈಕ್ಷಣಿಕ ವರ್ಷ ಇರಲಿ
* ಆನ್ಲೈನ್ ಕ್ಲಾಸ್ ಜೊತೆಗೆ ಆಫ್ಲೈನ್ ತರಗತಿ ಮಾಡಲು ಅವಕಾಶ ನೀಡಿ
* ಮಕ್ಕಳ ದೃಷ್ಟಿಯಿಂದ ಪಾಳಿ ವ್ಯವಸ್ಥೆ ಶಾಲೆ ನಡೆಸಲು ಕ್ರಮ ವಹಿಸಿ
* ಕೊರೋನಾ ವಾರಿಯರ್ಸ್ ಶಿಕ್ಷಕರಿಗೆ ವಿಮೆ ಮಾಡಿಸಿ
* ಶಾಲೆ ಓಪನ್ಗೆ ಮುನ್ನ ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿ
* ಎರಡು ಮತ್ತು ಮೂರನೇ ಕಂತಿನ ಶುಲ್ಕ ಪಡೆಯಲು ಅವಕಾಶ ಕೊಡಿ