ರಾಮನಗರ: ಉಪ ಚುನಾವಣೆಗೆ ಕೊರೊನಾ ನಿಯಮಗಳು ಅನ್ವಯವಾಗಲ್ಲ ಎಂಬ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಚುನಾವಣೆಗೆ ಕೊರೊನಾ ಹೆದರಿಕೊಂಡು ಓಡಿ ಹೋಗುತ್ತಾ ಎಂದು ರಾಜ್ಯ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, ಉಪ ಚುನಾವಣೆಯಲ್ಲಿ ಮಸ್ಕಿ ಮತ್ತು ಬೆಳಗಾವಿಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಕೊರೊನಾ ತಡೆಗೆ ರಾಜ್ಯ ಸರ್ಕಾರವೇ ನಿಯಮಗಳನ್ನು ತಂದಿದೆ. ಮುಂದೆ ಅನಾಹುತ ಆಗದಂತೆ ಸರ್ಕಾರ ನಿಯಮಗಳನ್ನ ತೆಗೆದುಕೊಳ್ಳಬೇಕು. ನಮ್ಮ ಅನಕೂಲಗಳಿಗೆ ಬೇಕಾದಂತೆ ಕೊರೊನಾ ನಿಯಮಗಳನ್ನ ಮಾರ್ಪಾಡು ಮಾಡಿಕೊಂಡು ಅನಾಹುತಗಳಿಗೆ ದಾರಿ ಮಾಡಿಕೊಡಬಾರದು ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಸಿಎಂ ಹೇಳಿದ್ದೇನು?: ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಾರ್ಯಕ್ರಮಕ್ಕೆ ಮಿತಿ ಷರತ್ತು ಹಾಕಿದ್ದೇವೆ. ಸಾರ್ವಜನಿಕ ಸಭೆಗಳಿಗೆ ಯಾವುದೇ ನಿಬಂಧನೆ ಹಾಕಿಲ್ಲ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು ಎಚ್ಚರಿಕೆಯಿಂದ ಕಾರ್ಯಕ್ರಮ ಮಾಡಬಹುದು. ಕೊರೊನಾ ಟಫ್ ರೂಲ್ಸ್ ಹಾಗೂ ಜನ ಸಂಖ್ಯೆ ಮಿತಿ ಉಪಚುನಾವಣೆಗೆ ಅಪ್ಲೈ ಆಗೋದಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.