– ರೋಣ, ಶಿರಹಟ್ಟಿಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ
ಗದಗ: ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಕದ್ದು ಮುಚ್ಚಿ ನಡೆಯುತ್ತಿರುವ ಬಾಲ್ಯ ವಿವಾಹ ಪ್ರಕರಣಗಳಿಗೆ ಬ್ರೇಕ್ ಬಿದ್ದಿವೆ. ಈ ಕುರಿತು ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಅವಿನಾಶಲಿಂಗ ಗೋಟಖಿಂಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು. ಎಪ್ರಿಲ್ ಹಾಗೂ ಮೇ ಈ 2 ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 21 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.
16 ವರ್ಷದ ಬಾಲಕಿಯ ವಿವಾಹ ಗದಗ ತಾಲೂಕಿನ ಮದಗಾನೂರನಲ್ಲಿ ನಡೆದು ಹೋಗಿತ್ತು. ಈ ಕುರಿತು ತನಿಖೆ ನಡೆಸಿ ಸಂಬಂಧಿಸಿದ ಎರಡು ಕಡೆಯ ಪಾಲಕರ ಮೇಲೆ ಕಾನೂನು ಕ್ರಮ ಜರುಗಿಸಲು ಸ್ಥಳೀಯ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಸೂಚಿಸಿದ್ದಾರೆ.
ಸೋಮವಾರ 3 ಬಾಲ್ಯ ವಿವಾಹವನ್ನು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರವೀಣ್ ಬೆಟಗೇರಿ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ, ಸ್ಥಳೀಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆಲ್ಲಿ ತಡೆ ಹಿಡದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಸಾಪೂರ ಗ್ರಾಮದಲ್ಲಿ 15 ವರ್ಷದ ಬಾಲಕಿ, ಅಸೂಟಿ ಗ್ರಾಮದಲ್ಲಿ 16 ವರ್ಷ ಹಾಗೂ 17 ವರ್ಷದ ಇಬ್ಬರು ಬಾಲಕಿಯರ ವಿವಾಹ ನಿಲ್ಲಿಸಿದ್ದಾರೆ.
ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಗ್ರಾ.ಪಂ ಪಿಡಿಓ, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ದಾಳಿ ಮಾಡಿ ಜಿಲ್ಲೆಯ ಒಟ್ಟು 21 ಬಾಲಕಿಯರನ್ನ ರಕ್ಷಣೆ ಮಾಡಲಾಗಿದೆ. ರಕ್ಷಣೆಗೊಳಪಟ್ಟ ಮಕ್ಕಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. 18 ವರ್ಷ ಮೆಲ್ಪಟ್ಟ ನಂತರ ಮದುವೆ ಮಾಡುವಂತೆ ಪಾಲಕರಿಗೆ ಸೂಚಿಸಿ ಅವರಿಂದ ಮುಚ್ಚಳಿಕೆ ಪ್ರಮಾಣ ಪತ್ರ ಬರೆಸಿಕೊಳ್ಳಲಾಗಿದೆ.
ಜಿಲ್ಲೆಯ ರೋಣ ತಾಲೂಕು ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.