ಶಿವಮೊಗ್ಗ: ಮದ್ಯವ್ಯಸನಿ ಯುವಕನೊಬ್ಬ ಕುಡಿಯಲು ಹಣ ಕೊಡಲಿಲ್ಲವೆಂದು ಅಜ್ಜಿಯನ್ನು ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ.
ಜಿಲ್ಲೆಯ ಭದ್ರಾವತಿಯ ತಾಸ್ಕೆಂಟ್ ನಗರದಲ್ಲಿ ಘಟನೆ ನಡೆದಿದ್ದು, ಕೊಲೆಯಾದವರನ್ನು ಕಿಟ್ಟಮ್ಮ (75) ಎಂದು ಗುರುತಿಸಲಾಗಿದೆ. ಅರುಣ್ ಕುಮಾರ್ (28) ಹತ್ಯೆಗೈದ ಆರೋಪಿ. ಅರುಣ್ ಕುಮಾರ್ ಗಾರೆ ಕೆಲಸ ಮಾಡುತ್ತಿದ್ದನು. ಕೊರೊನಾದಿಂದಾಗಿ ಕೆಲಸ ಸಿಗದ ಕಾರಣ ಮನೆಯಲ್ಲಿಯೇ ಇರುತ್ತಿದ್ದ. ಮದ್ಯವ್ಯಸನಿಯಾಗಿದ್ದ ಆರೋಪಿ, ಕುಡಿಯಲು ಹಣ ನೀಡುವಂತೆ ಪ್ರತಿನಿತ್ಯ ತನ್ನ ಅಜ್ಜಿಯನ್ನು ಪೀಡಿಸುತ್ತಿದ್ದ.
ಅದೇ ರೀತಿ ಇಂದು ಸಹ ತನ್ನ ಅಜ್ಜಿಗೆ ಹಣ ನೀಡುವಂತೆ ಪೀಡಿಸಿದ್ದಾನೆ. ಹಣ ನೀಡದಿದ್ದಾಗ ಕುಡುಗೋಲಿನಿಂದ ಹೊಡೆದು ಹತ್ಯೆಗೈದಿದ್ದಾನೆ. ಘಟನೆ ಬಳಿಕ ಹೊಸಮನೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಹೊಸಮನೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.