ಹಾಸನ: ಕಾಡಾನೆಗಳ ವಿಡಿಯೋ ಮಾಡ್ತಿದ್ದ ಯುವಕನನ್ನು ಆನೆಯೊಂದು ಓಡಿಸಿದ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಸಕಲೇಶಪುರ ತಾಲೂಕಿನ ಮಳಲಿ, ವಡೂರು, ಹಾಲೇಬೇಲೂರು ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಸಂಚಾರ ಮಾಡುತ್ತಿವೆ.
ಈ ಸಂದರ್ಭದಲ್ಲಿ ಕಾಡಾನೆಗಳ ವೀಡಿಯೋ ಮಾಡುತ್ತಿದ್ದ ಯುವಕನನ್ನು ಆನೆ ಅಟ್ಟಾಡಿಸಿಕೊಂಡು ಬಂದಿದ್ದು, ಯುವಕ ದಿಕ್ಕಾಪಾಲಾಗಿ ಓಡಿಹೋಗಿದ್ದಾನೆ. ಯುವಕ ತನ್ನ ಮೊಬೈಲಿನಲ್ಲಿ ಆ ದೃಶ್ಯವನ್ನು ಸೆರೆಹಿಡಿದಿದ್ದಾನೆ.
ಕಾಡಾನೆಗಳಿವೆ ಯಾರೂ ಅವುಗಳ ಹತ್ತಿರ ಹೋಗಬೇಡಿ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಸೂಚನೆ ನೀಡಿದ್ರೂ ಯುವಕರು ಕ್ಯಾರೇ ಎನ್ನದೇ ಕಾಡಾನೆಗಳ ಮುಂದೆ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ.
ಕಳೆದ ಒಂದು ವಾರದಿಂದ ಜನನಿಬಿಡ ಪ್ರದೇಶದಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು, ಕಾಡಾನೆಗಳನ್ನು ಕಂಡು ಎಸ್ಟೇಟ್ ನಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರು ಓಡಿಹೋಗುತ್ತಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಂತೆ ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.