ಮಂಡ್ಯ: ಜಿಲ್ಲೆಯಲ್ಲಿನ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಐವರ ಗ್ಯಾಂಗ್ ಒಂದನ್ನು ಮಂಡ್ಯದ ಪೊಲೀಸರ ತಂಡ ಅರೆಸ್ಟ್ ಮಾಡಿದೆ.
ಆರೋಪಿಗಳೆಲ್ಲರೂ ಕೂಡ ವೆಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದವರು. ಮಹಾಮಾರಿ ಕೊರೊನಾ ಅವರ ಕೆಲಸ ಕಸಿದುಕೊಂಡಿತ್ತು. ಹಾಗಾಗಿ ಕುಟುಂಬ ನಿರ್ವಹಣೆಗೆ ಅವರು ಕಳ್ಳತನ ಮಾಡುವ ದುರ್ಮಾರ್ಗ ಆಯ್ಕೆಮಾಡಿಕೊಂಡಿದ್ದರು.
ಈ ನಡುವೆ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆ ಗ್ಯಾಂಗ್ ಮಂಡ್ಯದ ಜನರಲ್ಲಿ ಆತಂಕ ಹುಟ್ಟಿಸಿದ್ರೆ, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದರು ಇದೀಗ ಕೊನೆಗೂ ಖದೀಮರನ್ನು ಹೆಡೆಮುರಿಕಟ್ಟುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳನ್ನು ಮದ್ದೂರು ಮಟ್ಟಣದ ನಿವಾಸಿಗಳಾದ ರೂಹಿದ್ ಪಾಷ, ಅಶುಪಾಷ, ಇಮ್ರಾನ್ ಖಾನ್, ಮತೀನ್ವುಲ್ಲಾ ಖಾನ್ ಹಾಗೂ ರಾಮನಗರದ ನೂರ್ ಅಹಮದ್ ಎಂದು ಗುರುತಿಸಲಾಗಿದೆ. ಇವರು ಮದುವೆ ಸೇರಿದಂತೆ ಶುಭಕಾರ್ಯಗಳಿಗೆ ತೆರಳುವ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದರು.
ಇವರ ಹಾವಳಿಯಿಂದಾಗಿ ಜಿಲ್ಲೆಯಲ್ಲಿ ಮಹಿಳೆಯರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿತ್ತು. ಇನ್ನೊಂದೆಡೆ ಪೊಲೀಸರ ಮೇಲೂ ಒತ್ತಡ ಹೆಚ್ಚಾಗಿತ್ತು ಹಾಗಾಗಿ ಈ ಗ್ಯಾಂಗ್ ಹೆಡೆಮುರಿ ಕಟ್ಟೋದಕ್ಕೆ ಮಂಡ್ಯ ಎಸ್ಪಿ ಡಾ.ಅಶ್ವಿನಿ ವಿಶೇಷ ತಂಡವನ್ನು ರಚಿಸಿದ್ದರು. ಇದೀಗ ಕೊನೆಗೂ ಐವರು ಸರಗಳ್ಳರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 3.55 ಲಕ್ಷ ರೂ. ನಗದು, 250 ಗ್ರಾಂ ಚಿನ್ನದ ಸರಗಳು ಹಾಗೂ 2 ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.