ಬೆಂಗಳೂರು: ಎಲ್ಲರೂ ಲಾಕ್ಡೌನ್ ಬೆಸ್ಟ್ ಅಂತಿದಾರೆ, ಸರ್ಕಾರನೂ ಹಂಗೇ ಮಾಡಬೇಕು ಅಂತಿದೆ. ಆದರೆ ಜನ ಒಪ್ಪಬೇಕಲ್ಲ ಎಂದು ಹೇಳುವ ಮೂಲಕ ಲಾಕ್ಡೌನ್ ಮಾಡುವ ಸುಳಿವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ್ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಲಾಕ್ಡೌನ್ ಬೆಸ್ಟ್ ಅಂತಿದಾರೆ, ಸರ್ಕಾರ ಸಹ ಅದನ್ನೇ ಮಾಡಬೇಕು ಅಂತಿದೆ. ಆದರೆ ಜನ ಬೇಡ ಎಂದು ಹೇಳುತ್ತಿದ್ದಾರೆ. ಜನರಿಗೆ ಮಾಮೂಲಾಗಿರಬೇಕು, ಆರಾಮವಾಗಿರಬೇಕು. ಯಾರು ಸಾಯುತ್ತಿದ್ದಾರೋ ಸಾಯಲಿ ಎನ್ನುವ ರೀತಿಯಲ್ಲಿ ಮಾತನಾಡಿದರೆ ನಾವೇನು ಮಾಡಲು ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈ ಸಿಎಂ ಜೊತೆ ಒಂದು ಸುತ್ತು ಚರ್ಚೆಯಾಗಿದೆ, ಕ್ಯಾಬಿನೆಟ್ ಸಭೆಯಲ್ಲಿ ಯಾವ ರೀತಿಯ ಚರ್ಚೆ, ಸಲಹೆಗಳು ಬರುತ್ತವೆಯೋ ನೋಡಿಕೊಂಡು ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿಗಳು ಕೈಗೊಳ್ಳುತ್ತಾರೆ. ಕ್ಯಾಬಿನೆಟ್ ಸಭೆ ಬಳಿ ಸುದ್ದಿಗೋಷ್ಠಿ ನಡೆಸಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಾಹಿತಿ ನೀಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೊಕ್ ತಿಳಿಸಿದ್ದಾರೆ.