ನವದೆಹಲಿ: ಇನ್ಮೇಲಿಂದ ಶಾಹಿದ್ ಅಫ್ರಿದಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವನು ಮಿತಿಗಳನ್ನು ದಾಟಿದ್ದಾನೆ ಎಂದು ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಗರಂ ಆಗಿದ್ದಾರೆ.
ಸದಾ ಕಾಶ್ಮೀರಾ ವಿಚಾರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಅಫ್ರಿದಿ ಆಗಾಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಈಗ ಮತ್ತೆ ಕಾಶ್ಮೀರ ವಿಚಾರವಾಗಿ ಮಾತನಾಡಿರುವ ಅಫ್ರಿದಿ, ಭಾರತದ ಪ್ರಧಾನಿ ಮೋದಿ ಅವರನ್ನು ಬಗ್ಗೆಯೂ ತೆಗಳಿ ಟ್ವೀಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಭಾರತೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಗೌತಮ್ ಗಂಭೀರ್ ಮತ್ತು ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
- Advertisement 2
- Advertisement 3
ಇದಕ್ಕೂ ಮುನ್ನ ಅಫ್ರಿದಿ ಮತ್ತು ಹರ್ಭಜನ್ ಸಿಂಗ್ ಅವರು ಉತ್ತಮ ಸ್ನೇಹಿತರಾಗಿದ್ದರು. ಜೊತೆಗೆ ಪಾಕಿಸ್ತಾನದಲ್ಲಿ ಇರುವ ಶಾಹಿದ್ ಅಫ್ರಿದಿ ಫೌಂಡೇಶನ್ ಗೆ ಸಹಾಯ ಮಾಡುವಂತೆ ಸ್ವತಃ ಹರ್ಭಜನ್ ಸಿಂಗ್ ಅವರೇ ಕೇಳಿಕೊಂಡಿದ್ದರು. ಆದರೆ ಕಾಶ್ಮೀರದ ಬಗ್ಗೆ ಅಫ್ರಿದಿ ಕೆಟ್ಟ ಹೇಳಿಕೆ ನೀಡಿದ ನಂತರ ಭಜ್ಜಿ ಅಫ್ರಿದಿ ಮೇಲೆ ಗರಂ ಆಗಿದ್ದಾರೆ. ಅವನು ಮಿತಿ ಮೀರಿದ್ದಾನೆ. ಇನ್ಮೇಮಿಂದ ಅವನಿಗೂ ನನಗೂ ಸಂಬಂಧವಿಲ್ಲ ಎಂದು ಭಜ್ಜಿ ಹೇಳಿದ್ದಾರೆ.
- Advertisement 4
ಈ ವಿಚಾರವಾಗಿ ಸ್ಪೋರ್ಟ್ಸ್ ಚಾನೆಲ್ವೊಂದರಲ್ಲಿ ಮಾತನಾಡಿರುವ ಭಜ್ಜಿ, ಶಾಹಿದ್ ಅಫ್ರಿದಿ ನಮ್ಮ ದೇಶದ ಬಗ್ಗೆ ಮತ್ತು ನಮ್ಮ ಪ್ರಧಾನಿ ಮೋದಿ ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ. ಮಾತಿನ ಮೇಲೆ ನಿಗಾ ಇರಬೇಕು. ಅಫ್ರಿದಿಗೆ ನಮ್ಮ ದೇಶದ ಬಗ್ಗೆ ಮಾತನಾಡಲು ಯಾವುದೇ ಹಕ್ಕು ಇಲ್ಲ. ಜೊತೆಗೆ ನಾವು ಕೂಡ ಅಫ್ರಿದಿಯೊಂದಿಗೆ ಸೇರಿ ಏನೂ ಮಾಡಬೇಕಿಲ್ಲ ಎಂದು ಭಜ್ಜಿ ಕಿಡಿಕಾರಿದ್ದಾರೆ.
ಈ ಹಿಂದೆ ಯುವರಾಜ್ ಸಿಂಗ್ ಮತ್ತು ಭಜ್ಜಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಫೌಂಡೇಶನ್ಗೆ ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ನಂತರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿ ಸ್ಪಷ್ಟನೆಯನ್ನು ನೀಡಿದ್ದರು. ಈ ವಿಚಾರದ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಪ್ರಮಾಣಿಕವಾಗಿ ಹೇಳಬೇಕು ಎಂದರೆ ಆತ ನಮಗೆ ಅವನ ಚಾರಿಟಿಗಾಗಿ ಮನವಿ ಮಾಡಲು ಹೇಳಿದ್ದ. ಒಳ್ಳೆಯ ವಿಚಾರ ಎಂದು ನಾವು ಮನವಿ ಮಾಡಿದೆವು ಅಷ್ಟೇ ಎಂದು ತಿಳಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟ ಗಡಿಗಳು ಮತ್ತು ಧರ್ಮ, ಜಾತಿಗಳನ್ನು ಮೀರಿ ಮಾಡಬೇಕು ಎಂದು ನಮ್ಮ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ. ಹಾಗಾಗಿ ನಾವು ಮಾಡುತ್ತಿರುವ ಮನವಿ ಬಗ್ಗೆ ತುಂಬ ಸ್ಪಷ್ಟತೆ ಇತ್ತು. ಆದ್ದರಿಂದ ಈ ಸಮಯದಲ್ಲಿ ಅವರಿಗೆ ಸಹಾಯ ಆಗಲಿ ಎಂದು ನಾವು ಮನವಿ ಮಾಡಿಕೊಂಡಿದ್ದೇವು. ಆದರೆ ಈಗ ಆತ ನಮ್ಮ ದೇಶದ ವಿರುದ್ಧವೇ ಮಾತನಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ.
ನಾನು ಈ ದೇಶದಲ್ಲಿ ಹುಟ್ಟಿದ್ದೇನೆ ಈ ದೇಶಕ್ಕಾಗಿ ಪ್ರಾಣ ನೀಡುತ್ತೇನೆ. 20 ವರ್ಷ ದೇಶದ ಪರವಾಗಿ ಆಡಿ ಹಲವಾರು ಪಂದ್ಯಗಳನ್ನು ಗೆದ್ದಿದ್ದೇವೆ. ನಾನು ದೇಶದ ವಿರುದ್ಧವಾಗಿ ಏನಾದರೂ ಮಾಡಿದ್ದೇನೆ ಎಂದು ಯಾರೂ ಹೇಳುವುದಿಲ್ಲ. ಇಂದಿಲ್ಲ ನಾಳೆ ನನ್ನ ದೇಶಕ್ಕೆ ಎಲ್ಲಿಯಾದರೂ ನನ್ನ ಅವಶ್ಯಕತೆ ಇದ್ದರೆ ಅದೂ ಗಡಿಯಲ್ಲಿ ಆದರೂ ಸರಿ ನಾನು ಹೋಗುತ್ತೇನೆ. ನನ್ನ ದೇಶಕ್ಕಾಗಿ ಗನ್ ಹಿಡಿದು ಹೋರಾಟ ನಡೆಸುತ್ತೇನೆ ಎಂದು ಭಜ್ಜಿ ಹೇಳಿದ್ದಾರೆ.
ಅಫ್ರಿದಿ ಟ್ವೀಟ್
ಕಾಶ್ಮೀರಿಗಳ ಸಂಕಟವನ್ನು ಅನುಭವಿಸಲು ಧಾರ್ಮಿಕ ನಂಬಿಕೆಯನ್ನು ತೆಗೆದುಕೊಳ್ಳಬೇಡಿ. ಅದರ ಬದಲು ಸೂಕ್ತವಾದ ಸ್ಥಳದಲ್ಲಿ ಒಳ್ಳೆಯ ಮನಸ್ಸು ಇರಬೇಕು. ಕಾಶ್ಮೀರವನ್ನು ಉಳಿಸಿ ಎಂದು ಬರೆದು ಅಫ್ರಿದಿ ಶುಕ್ರವಾರ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಂತರ ಟ್ವೀಟ್ ಮಾಡಿದ್ದ ಗೌತಮ್ ಗಂಭೀರ್ ಅಫ್ರಿದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.