– ಪರೀಕ್ಷೆ ನಡೆಸಲು ಅಧಿಕಾರಿಗಳು-ತಜ್ಞರ ಸಭೆ ಕರೆಯಬೇಕು
ಚಿತ್ರದುರ್ಗ: ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣ ನೀಡುವುದು ಅಪಾಯಕಾರಿಯಾಗಿದೆ. ಅಲ್ಲದೆ ಕೊರೊನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ತೆರೆಯಬಾರದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮುರುಘಾ ಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಭೇಟಿ ಬಳಿಕ ಮಾತನಾಡಿದ ಅವರು, ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿದ ಬಹುತೇಕರು ಸ್ಥಿತಿವಂತರೇ ಆಗಿರುತ್ತಾರೆ. ಅವರೂ ಕೊರೊನಾ ಸಂದರ್ಭದ ಲಾಭ ಪಡೆಯಬಾರದು. ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದಷ್ಡು ಬಡವರಿದ್ದರೆ ಪರಿಶೀಲಿಸಿ ವಿಶೇಷ ಪ್ರಕರಣ ಎಂದು ಸಹಾಯ ಮಾಡಬೇಕು. ಅಲ್ಲದೆ 1ನೇ ತರಗತಿಯಿಂದ ಪಿಯುಸಿವರೆಗೆ ಆನ್ಲೈನ್ ಶಿಕ್ಷಣ ಸಾಧ್ಯವಿಲ್ಲ. ಹೀಗಾಗಿ ಅನಗತ್ಯ ರಜೆಗಳನ್ನು ರದ್ದುಪಡಿಸಿ, ಶನಿವಾರ ಫುಲ್ ಟೈಮ್ ಕ್ಲಾಸ್ ಮಾಡಬೇಕು. ಅಗತ್ಯವಿದ್ದರೆ ಯಾವುದಾದರು ಒಂದು ಶನಿವಾರ ಮಾತ್ರ ರಜೆ ನೀಡಬೇಕು ಎಂದರು.
ಪಠ್ಯ ಮುಕ್ತಾಯಗೊಳಿಸಲು ತಲೆಕೆಡಿಸಿಕೊಳ್ಳುವ ಬದಲಾಗಿ ಶಾಲಾ ಸಮಯವನ್ನು ಅರ್ಧಗಂಟೆ ಹೆಚ್ಚಿಸಬೇಕು. ಪ್ರತಿ ವರ್ಷ ನೀಡುವ ದಸರಾ ರಜೆ ರದ್ದು ಮಾಡುವುದರ ಜೊತೆಗೆ ವಿವಿಧ ಜಯಂತಿ ಆಚರಣೆಗಳ ರಜೆಗಳನ್ನು ಸಹ ರದ್ದು ಮಾಡಬೇಕು ಎಂದು ಸಲಹೆ ನೀಡಿದರು.
ಪರೀಕ್ಷೆ ನಡೆಸಲು ಸರ್ಕಾರ ಸಿದ್ಧವಾಗಿದ್ದು, ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳು 2 ಇದ್ದಲ್ಲಿ 4 ಮಾಡಿ ಪರೀಕ್ಷೆ ನಡೆಸಬೇಕಾಗಿದೆ. ಈ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉತ್ಸಾಹದಿಂದ ಓಡಾಡುತ್ತಾರೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಬೇಜವವ್ದಾರಿತನವಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಬಹುತೇಕರಿಗೆ ಕಳಕಳಿ ಇಲ್ಲವಾಗಿದೆ. ರಾಜ್ಯ ಸರ್ಕಾರ ನಮ್ಮ ಸಲಹೆ ಸೂಚನೆಯನ್ನು ಈವರೆಗೆ ಕೇಳಿಲ್ಲ. ಇಂತಹ ಸಮಯದಲ್ಲಿ ಅಧಿಕಾರಿಗಳು ಮತ್ತು ತಜ್ಞರ ಸಭೆ ಕರೆಯಬೇಕು ಆಗ ಇಂತಹ ಪರಿಸ್ಥಿತಿ ಎದುರಿಸಲು ಸಾಧ್ಯ ಎಂದು ತಿಳಿಸಿದರು.